ನವದೆಹಲಿ: ಅಬಕಾರಿ ನೀತಿ ಮೂಲಕ ಅನುಕೂಲ ಪಡೆದುಕೊಳ್ಳಲು ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಕ್ಕೆ ₹ 100 ಕೋಟಿ ನೀಡುವ ಮೂಲಕ ಬಿಆರ್ಎಸ್ ನಾಯಕಿ ಕೆ.ಕವಿತಾ ‘ಸಂಚು’ ನಡೆಸಿದ್ದರು ಎಂದು ಇ.ಡಿ ಆರೋಪಿಸಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಉನ್ನತ ನಾಯಕರಾದ ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಅವರ ಜೊತೆಗೂಡಿ ಕವಿತಾ ಮತ್ತು ಇತರರು ಸಂಚು ನಡೆಸಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ಹೇಳಿಕೆ ನೀಡಿದೆ.
ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿ, 46 ವರ್ಷದ ಕವಿತಾ ಅವರನ್ನು ಇ.ಡಿ ಕಳೆದ ವಾರ ಹೈದರಾಬಾದ್ನ ಅವರ ನಿವಾಸದಲ್ಲಿಯೇ ಬಂಧಿಸಿತ್ತು. ಕವಿತಾ ಅವರನ್ನು ಮಾರ್ಚ್ 23ರವರೆಗೆ ಇ.ಡಿ ವಶಕ್ಕೆ ಒಪ್ಪಿಸಲಾಗಿದೆ.
2021–22ನೇ ಸಾಲಿನಲ್ಲಿ ಅಬಕಾರಿ ನೀತಿ ರೂಪಿಸಲು, ಜಾರಿಗೊಳಿಸಲು ಒತ್ತು ನೀಡಿದ್ದರು. ಭ್ರಷ್ಟಾಚಾರ ಮತ್ತು ಸಂಚು ನಡೆದಿದೆ. ಸಗಟು ವ್ಯಾಪಾರಿಗಳಿಂದ ನಿರಂತರವಾಗಿ ಕಿಕ್ಬ್ಯಾಕ್ ಪಡೆಯುವುದು ಇದರ ಉದ್ದೇಶವಾಗಿತ್ತು ಎಂದು ತಿಳಿಸಿದೆ.
ಅಬಕಾರಿಯ ವಹಿವಾಟು, ಲಾಭದಲ್ಲಿ ನಿರಂತರವಾಗಿ ಅನುಕೂಲ ಪಡೆಯುವುದು, ಎಎಪಿಗೆ ಮುಂಗಡವಾಗಿ ನೀಡಲಾಗಿದ್ದ ಹಣವನ್ನು ಪಡೆಯುವುದು ಕವಿತಾ ಮತ್ತು ಇತರರು ನಡೆಸಿದ್ದ ಸಂಚಿನ ಭಾಗವಾಗಿತ್ತು ಎಂದು ಇ.ಡಿ. ಹೇಳಿಕೆಯಲ್ಲಿ ತಿಳಿಸಿದೆ.
‘ಅಬಕಾರಿ ನೀತಿ ವಿಷಯದಲ್ಲಿ ತಮ್ಮ ಪಾತ್ರವಿಲ್ಲ’ ಎಂದು ಕವಿತಾ ಈ ಮೊದಲು ಅಲ್ಲಗಳೆದಿದ್ದರು. ಎಎಪಿ ಕೂಡಾ ‘ಬಿಜೆಪಿ ತನ್ನ ರಾಜಕೀಯ ಪ್ರತಿಸ್ಪರ್ಧಿಗಳನ್ನು ಹಣಿಯಲು ಇ.ಡಿ ಮತ್ತು ಸಿಬಿಐ ಅನ್ನು ಬಳಸಿಕೊಳ್ಳುತ್ತಿದೆ’ ಎಂದು ಆರೋಪಿಸಿತ್ತು.