ರುದ್ರಪ್ರಯಾಗ (ಉತ್ತರಾಕಾಂಡ): ರುದ್ರಪ್ರಯಾಗ ಬಳಿಯ ಗೌರಿಕುಂಡದಲ್ಲಿ ಬೃಹತ್ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಮೂವರು ಮೃತಪಟ್ಟಿದ್ದಾರೆ, 17 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇದರನಾಥಕ್ಕಿಂತ 16 ಕಿ.ಮೀ ಹಿಂದೆ ಘಟನೆ ನಡೆದಿದೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.
ಮಳೆಯಿಂದಾಗಿ ಹತ್ತಿರದ ತೆಹ್ರಿ ಜಲಾಶಯದಲ್ಲಿ ನೀರಿನ ಹರಿವು ಹೆಚ್ಚಳವಾಗಿರುವುದು ಭೂಕುಸಿತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಸ್ತೆ ಬದಿಯ ಎರಡು ಅಂಗಡಿಗಳು ಮತ್ತು ಡಾಬಾಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಅದರಲ್ಲಿ ನಾಲ್ವರು ಸ್ಥಳೀಯರು ಮತ್ತು 16 ಮಂದಿ ನೇಪಾಳಿ ಮೂಲದವರಿದ್ದರು. ನಾಪತ್ತೆಯಾದವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ತಂಡ (SDRF) ಹೇಳಿದೆ.