ಪುಣೆ: ಮಹಾರಾಷ್ಟ್ರದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಒತ್ತಾಯಿಸಿ ಮರಾಠ ಸಮುದಾಯ ನಡೆಸುತ್ತಿರುವ ಪ್ರತಿಭಟನೆಯ ಕಿಚ್ಚು ಚಕನ್ ಮತ್ತು ಖೇದ್ ಪ್ರದೇಶಗಳಿಗೂ ವ್ಯಾಪಿಸಿದೆ.ಈ ಪ್ರತಿಭಟನೆಯಲ್ಲಿ 20 ವಾಹನಗಳು ಸುಟ್ಟು ಭಸ್ಮಗೊಂಡಿದ್ದು, 40 ವಾಹನಗಳಿಗೆ ಹಾನಿಯಾಗಿದೆ.
ಪ್ರತಿಭಟನಾಕಾರರು ಪುಣೆ-ನಾಶಿಕ್ ರಾಷ್ಟ್ರೀಯ ಹೆದ್ದಾರಿಯನ್ನು7 ಗಂಟೆಗಳ ಕಾಲ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಹಿಂಸಾಚಾರದಲ್ಲಿ ಏಳು ಪೊಲೀಸರಿಗೆ ಗಾಯಗಳಾಗಿವೆ.
ಸೊಲ್ಲಾಪುರದಲ್ಲೂ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಬಸ್ಗಳಿಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
35 ವರ್ಷದ ವ್ಯಕ್ತಿಯೊಬ್ಬ ಔರಾಂಗಾಬಾದ್ನಲ್ಲಿ ಚಲಿಸುತ್ತಿರುವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಜೈಸಿಂಗ್ ಎಂದು ಈತನನ್ನು ಗುರುತಿಸಲಾಗಿದೆ. ಮೀಸಲಾತಿಗಾಗಿ ಜೀವ ಕೊಡುವುದಾಗಿ ಈತ ಆತ್ಮಹತ್ಯೆಗೆ ಮುನ್ನ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದ. ಈ ಸಂದೇಶವನ್ನುವ್ಯಾಟ್ಸ್ ಆಪ್ನಲ್ಲೂ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.