ನವದೆಹಲಿ: ಕತಾರ್ನಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಭಾರತೀಯ ನೌಕಾಪಡೆಯ ಅಧಿಕಾರಿಗಳ ಬಿಡುಗಡೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್ ನಟ ಶಾರುಕ್ ಖಾನ್ ಅವರ ಸಹಕಾರ ಪಡೆದಿದ್ದರು ಎಂಬ ರಾಜ್ಯಸಭಾ ಮಾಜಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರ ಪೋಸ್ಟ್ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದೆ.
ಯುಎಇನಲ್ಲಿ ನಿರ್ಮಾಣವಾದ ಮೊದಲ ಹಿಂದೂ ದೇವಾಲಯ ಉದ್ಘಾಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಫೆಬ್ರುವರಿ 14ರಂದು ಯುಎಇ ಮತ್ತು ಕತಾರ್ಗೆ ಭೇಟಿ ನೀಡಲಿದ್ದೇನೆ ಎಂದು ಮೋದಿ ಅವರು ಎಕ್ಸ್ನಲ್ಲಿ ಮಾಹಿತಿ ನೀಡಿದ್ದು, ‘ಹೋಗುವಾಗ ಜೊತೆಯಲ್ಲಿ ಶಾರುಕ್ ಖಾನ್ ಅವರನ್ನು ಕರೆದುಕೊಂಡು ಹೋಗಿ’ ಎಂದು ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
‘ಮರಣದಂಡನೆ ಶಿಕ್ಷೆಗೊಳಗಾಗಿದ್ದ ನೌಕಾಪಡೆ ಸಿಬ್ಬಂದಿ ಬಿಡುಗಡೆಗೆ ಸಂಬಂಧಿಸಿದಂತೆ ಕತಾರ್ ಶೇಖ್ಗಳ ಮನವೊಲಿಸಲು ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆ ವಿಫಲವಾಗಿದ್ದವು. ಈ ವಿಷಯದಲ್ಲಿ ಮಾತುಕತೆ ನಡೆಸುವಂತೆ ಮೋದಿ ಅವರು ಶಾರುಕ್ ಖಾನ್ ಅವರಿಗೆ ಮನವಿ ಮಾಡಿದ್ದರು. ಶಾರುಕ್ ಅವರ ಮಧ್ಯಪ್ರವೇಶದಿಂದ ನೌಕಾಪಡೆಯ ಅಧಿಕಾರಿಗಳ ಬಿಡುಗಡೆಯಾಗಿದೆ. ಹೀಗಾಗಿ ಕತಾರ್ಗೆ ಶಾರುಕ್ ಖಾನ್ ಅವರನ್ನೂ ಕರೆದುಕೊಂಡು ಹೋಗಬೇಕು’ ಎಂದು ಸುಬ್ರಮಣಿಯನ್ ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಬೇಹುಗಾರಿಕೆ ಮಾಡಿದ ಆರೋಪದ ಮೇಲೆ ಕತಾರ್ನಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿದ್ದ ಭಾರತೀಯ ನೌಕಾಪಡೆಯ ಎಂಟು ಮಂದಿ ಮಾಜಿ ಸಿಬ್ಬಂದಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.