ಐಜ್ವಾಲ್: ಮಿಜೋರಾಂ ಲೆಂಗ್ಪುಯಿ ಬಳಿ ಮ್ಯಾನ್ಮಾರ್ನ ಸೇನಾ ವಿಮಾನ ಮಂಗಳವಾರ ಬೆಳಿಗ್ಗೆ ಪತನವಾಗಿದ್ದು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಡಕಟ್ಟು ಸಮುದಾಯದ ಬಂಡುಕೋರರ ದಾಳಿಯಿಂದ ತಪ್ಪಿಸಿಕೊಳ್ಳಲು ಮಿಜೋರಾಂ ಗಡಿಯೊಳಗೆ ಬಂದಿದ್ದ ಮ್ಯಾನ್ಮಾರ್ನ ಯೋಧರನ್ನು ಸ್ವದೇಶಕ್ಕೆ ವಾಪಸ್ಸು ಕರೆದೊಯ್ಯಲು ಈ ವಿಮಾನ ಬಂದಿತ್ತು. ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಮಾಡುವ ವೇಳೆ ಮುಗ್ಗರಿಸಿದೆ.
ಇದು ಚಿಕ್ಕಗಾತ್ರದ ವಿಮಾನವಾಗಿದ್ದು, ಪೈಲಟ್ ಸೇರಿ 14 ಮಂದಿ ಇದರಲ್ಲಿ ಇದ್ದರು. ಗಾಯಗೊಂಡ 8 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಘಟನೆ ಹೇಗೆ ನಡೆಯಿತು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.
ಅಧಿಕಾರಿಗಳು ಘಟನೆಯ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ವಿಮಾನವು ಕಾಡಿನಲ್ಲಿ ಬಿದ್ದಿರುವುದು ಮತ್ತು ಎರಡು ಭಾಗವಾಗಿರುವುದು ಕಂಡುಬರುತ್ತದೆ.
ತನಿಖೆಗೆ ಆದೇಶ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಘಟನೆ ಕುರಿತು ತನಿಖೆಗೆ ಅದೇಶಿಸಿದೆ. ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇಲ್ಲಿ ನಿಲುಗಡೆ ಮಾಡಬೇಕಿದ್ದ ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬಂಡುಕೋರರ ಗುಂಪೊಂದು ಅಲ್ಲಿಯ ಸೇನೆಯ ಮೇಲೆ ಆಕ್ರಮಣ ನಡೆಸಿತ್ತು. ಹೀಗಾಗಿ ಒಟ್ಟು 276 ಯೋಧರು ಕಳೆದವಾರ ಮಿಜೋರಾಂ ಗಡಿ ಪ್ರವೇಶಿಸಿದ್ದರು. ಅವರಲ್ಲಿ 184 ಯೋಧರನ್ನು ಸೋಮವಾರ ವಾಪಸ್ಸು ಕಳಿಸಲಾಗಿತ್ತು. ಇನ್ನುಳಿದ 92 ಯೋಧರನ್ನು ಮಂಗಳವಾರ ವಾಪಸ್ಸು ಕಳಿಸಬೇಕಿತ್ತು.