ನವದೆಹಲಿ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಅಜಿತ್ ಪವಾರ್ ಅವರು ಸರ್ಕಾರವನ್ನು ಕೂಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಿ ಯಾರೊಬ್ಬರಿಗೂ ಅಸಮಾಧಾನ ಇಲ್ಲ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಗುರುವಾರ ಹೇಳಿದ್ದಾರೆ.
ಅಜಿತ್ ಪವಾರ್ ಹಾಗೂ ಎನ್ಸಿಪಿಯ ಇತರ 8 ಶಾಸಕರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವುದರಿಂದ ಏಕನಾಥ ಶಿಂದೆ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ಬರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಏಕನಾಥ ಶಿಂದೆ ಅವರು, 'ಇವು ವಿರೋಧ ಪಕ್ಷಗಳು ಹರಡುತ್ತಿರುವ ವದಂತಿ' ಎಂದು ಸ್ಪಷ್ಟ ಪಡಿಸಿದ್ದಾರೆ.
ಅಜಿತ್ ಪವಾರ್ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ಸರ್ಕಾರಕ್ಕೆ ಸೇರ್ಪಡೆಯಾಗಿರುವ ಬಗ್ಗೆ ಶಿವಸೇನಾದ (ಏಕನಾಥ ಶಿಂದೆ ಬಣ) ಕೆಲವು ಶಾಸಕರು ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಂದೆ, ತಮ್ಮ ಪಕ್ಷದ ಶಾಸಕರು, ಸಂಸದರು ಮತ್ತು ಪರಿಷತ್ ಸದಸ್ಯರೊಂದಿಗೆ ಬುಧವಾರ ಸಭೆ ನಡೆಸಿದ್ದರು. ಇದರ ಬೆನ್ನಲ್ಲೇ ಅಜಿತ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗುವ ಬಯಕೆ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ತಮ್ಮ ಶಾಸಕರ ಅನರ್ಹತೆಗೆ ಒತ್ತಾಯಿಸಿ ಸಲ್ಲಿಕೆಯಾಗಿರುವ ದೂರುಗಳ ಕುರಿತಂತೆ ವಿಧಾನಸಭೆ ಸ್ಪೀಕರ್ ಅವರ ಆದೇಶಕ್ಕೆ ಕಾಯುತ್ತಿರುವ ಶಿಂದೆ ಬಣದಲ್ಲಿ ಅಜಿತ್ ಹೇಳಿಕೆ ಇನ್ನಷ್ಟು ಆತಂಕ ಸೃಷ್ಟಿಸಿದೆ.
ಶಿಂದೆ ಬಣದ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ಉದಯ್ ಸಮಂತ್ ಅವರು, ಶಿಂದೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಪ್ರಕಟವಾಗಿರುವ ವರದಿಗಳು ಸುಳ್ಳು ಎಂದಿದ್ದಾರೆ.
ಇವನ್ನೂ ಓದಿ
* ನಿಮಗೆ ವಯಸ್ಸಾಯಿತು, ನಿವೃತ್ತಿ ಪಡೆಯಿರಿ: 'ಹಠಮಾರಿ' ಚಿಕ್ಕಪ್ಪನಿಗೆ ಅಜಿತ್ ಪವಾರ್ ಸಲಹೆ
* ಶಾಸಕರ ಅನರ್ಹತೆ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಿ: ಸ್ಪೀಕರ್ಗೆ ಉದ್ಧವ್ ಆಗ್ರಹ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.