ಚೆನ್ನೈ: ಎಐಎಡಿಎಂಕೆ ಪಕ್ಷದಿಂದ ಉಚ್ಚಾಟಿತರಾಗಿರುವ ಒ. ಪನ್ನೀರಸೆಲ್ವಂ ಅವರು ಪಕ್ಷದ ಚಿಹ್ನೆ, ಎರಡು ಎಲೆಗಳು ಹಾಗೂ ಬಾವುಟ, ಅಧಿಕೃತ ಲೆಟರ್ಹೆಡ್ ಬಳಸುವಂತಿಲ್ಲ ಎಂದು ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ಗುರುವಾರ ವಜಾಗೊಳಿಸಿದೆ.
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಪನ್ನೀರಸೆಲ್ವಂ ಅವರು ಮೇಲ್ಮನವಿ ಸಲ್ಲಿಸಿದ್ದರು. ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಬದಲಾಯಿಸಲು ಯಾವ ಆಧಾರವೂ ಇಲ್ಲ ಎಂದು ವಿಭಾಗೀಯ ಪೀಠವು ಹೇಳಿದೆ.
ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ 2022ರ ಜುಲೈ 11ರಂದು ಉಚ್ಚಾಟಿಸಲಾಗಿತ್ತು. ಅದರ ನಂತರವೂ ಅವರು ತಮ್ಮನ್ನು ಪಕ್ಷದ ಸಮನ್ವಯಕಾರ ಎಂದು ಕರೆದುಕೊಂಡಿದ್ದರು, ಪಕ್ಷದ ಚಿಹ್ನೆ ಹಾಗೂ ಲೆಟರ್ಹೆಡ್ ಬಳಕೆ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿ ಎಐಎಡಿಎಂಕೆ ಹೈಕೋರ್ಟ್ ಮೆಟ್ಟಿಲೇರಿತ್ತು.