ನವದೆಹಲಿ: ಹುತಾತ್ಮ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ಅಂತಿಮ ಯಾತ್ರೆಯ ವೇಳೆ ಪ್ರೀತಿ ಮತ್ತು ಗೌರವ ತೋರಿದ ಎಲ್ಲರಿಗೂ ಆಭಾರಿಯಾಗಿದ್ದೇವೆ ಎಂದು ಅವರ ಪೋಷಕರು ಭಾನುವಾರ ಹೇಳಿದ್ದಾರೆ.
‘ನಮ್ಮ ಪ್ರೀತಿಯ ಪುತ್ರ ಪ್ರಾಂಜು ವೀರ ಯೋಧನಾಗಿ ಹುತಾತ್ಮನಾಗಿದ್ದಾನೆ. ಅವನಿಗೆ ಜನರು ತೋರಿದ ಪ್ರೀತಿ, ಗೌರವ ಹೃದಯಸ್ಪರ್ಶಿಯಾಗಿತ್ತು’ ಎಂದು ಅವರ ತಂದೆ ಎಂ.ವಿ. ವೆಂಕಟೇಶ್ ಮತ್ತು ತಾಯಿ ಅನುರಾಧಾ ವೆಂಕಟೇಶ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಪ್ರಾಂಜಲ್ ಅವರು ಹುತಾತ್ಮರಾಗಿದ್ದರು. ಅವರ ಅಂತ್ಯಕ್ರಿಯೆಯು ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಬೆಂಗಳೂರಿನ ಸೋಮಸುಂದರಪಾಳ್ಯದ ಚಿತಾಗಾರದಲ್ಲಿ ಶನಿವಾರ ನೆರವೇರಿತ್ತು.