ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮೋಜಿ ರಾವ್‌ ನಿಧನ | ಸಂತಾಪ ಸೂಚಿಸಿದ ಗಣ್ಯರು..ಪ್ರಮುಖರಿಂದ ಅಂತಿಮ ದರ್ಶನ

Published 8 ಜೂನ್ 2024, 12:26 IST
Last Updated 8 ಜೂನ್ 2024, 12:26 IST
ಅಕ್ಷರ ಗಾತ್ರ

ಬೆಂಗಳೂರು: ರಾಮೋಜಿ ಫಿಲ್ಮ್​ ಸಿಟಿಯ ಸಂಸ್ಥಾಪಕ, ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಶನಿವಾರ ಮುಂಜಾನೆ ವಿಧಿವಶರಾಗಿದ್ದಾರೆ.

ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಿರವಾಣಿ, ರಾಜಮೌಳಿ ಸೇರಿದಂತೆ ಟಾಲಿವುಡ್‌ ಗಣ್ಯರು ರಾಮೋಜಿ ರಾವ್ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ.

ಸಂತಾಪ ಸೂಚಿಸಿದ ಗಣ್ಯರು:

ರಾಮೋಜಿ ಅವರ ರಾವ್​ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಟಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದಾರೆ. ಚಿರಂಜೀವಿ, ರಾಜಮೌಳಿ, ಜೂನಿಯರ್ ಎನ್‌ಟಿಆರ್, ರಾಮ್ ಗೋಪಾಲ್ ವರ್ಮಾ ಅವರಂತಹ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ರಾಮೋಜಿ ರಾವ್​ ಅವರ ನಿಧನ ತೀವ್ರ ದುಃಖ ತಂದಿದೆ. ಭಾರತೀಯ ಮಾಧ್ಯಮ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ ದಾರ್ಶನಿಕರಾಗಿದ್ದರು. ಅವರ ಕೊಡುಗೆಗಳು ಪತ್ರಿಕೋದ್ಯಮ ಮತ್ತು ಸಿನಿಮಾ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ. ಅವರು ಭಾರತದ ಅಭಿವೃದ್ಧಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಅವರೊಂದಿಗೆ ಸಂವಹನ ನಡೆಸಲು ಅವಕಾಶಗಳನ್ನು ಪಡೆದಿರುವುದು ನನ್ನ ಅದೃಷ್ಟ. ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ
–ನರೇಂದ್ರ ಮೋದಿ, ನಿಯೋಜಿತ ಪ್ರಧಾನಿ
ರಾಮೋಜಿ ರಾವ್ ಅವರ ಕೊಡುಗೆಗಳು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತವೆ. ಅವರ ನಿಧನದಿಂದ ಭಾರತದ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರ ಬಡವಾಗಿದೆ.
ದ್ರೌಪದಿ ಮುರ್ಮು, ರಾಷ್ಟ್ರಪತಿ
ಪತ್ರಿಕೋದ್ಯಮ, ಸಿನಿಮಾ ಮತ್ತು ಮನರಂಜನೆಗೆ ರಾಮೋಜಿ ರಾವ್ ಅವರ ಕೊಡುಗೆಗಳು ಶಾಶ್ವತ.
–ರಾಹುಲ್ ಗಾಂಧಿ, ಕಾಂಗ್ರೆಸ್‌ ನಾಯಕ
ಈನಾಡು ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರಾಮೋಜಿ ರಾವ್ ಅವರ ನಿಧನ ತೀವ್ರ ಆಘಾತವನ್ನುಂಟು ಮಾಡಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅವರು ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ. ಅಕ್ಷರ ಯೋಧರಾಗಿ ಎರಡು ತೆಲುಗು ರಾಜ್ಯಗಳು ಸೇರಿದಂತೆ ದೇಶಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ರಾಮೋಜಿ ಅವರ ನಿಧನ ಕೇವಲ ತೆಲುಗು ಭಾಷಿಕರಿಗೆ ಆದ ನಷ್ಟವಲ್ಲ, ದೇಶಕ್ಕೂ ತುಂಬಲಾರದ ನಷ್ಟ
–ಎನ್.​ ಚಂದ್ರಬಾಬು ನಾಯ್ಡು, ತೆಲುಗು ದೇಶಂ ಪಕ್ಷದ ಅಧ್ಯಕ್ಷ
ರಾಮೋಜಿ ರಾವ್ ಅವರ ನಿಧನವನ್ನು ನಂಬಲಾಗುತ್ತಿಲ್ಲ. ಅವರು ಓರ್ವ ವ್ಯಕ್ತಿಯಿಂದ ಸಂಸ್ಥೆಯಾಗಿ ರೂಪಾಂತರಗೊಂಡವರು. ಈ ಅದ್ಭುತ ವ್ಯಕ್ತಿತ್ವವನ್ನು ಕಳೆದುಕೊಂಡ ತೆಲುಗು ರಾಜ್ಯ ಕಂಬನಿ ಮಿಡಿಯುತ್ತಿದೆ.
ರಾಮ್ ಗೋಪಾಲ್ ವರ್ಮಾ, ನಿರ್ದೇಶಕ
ರಾಮೋಜಿ ಅವರಂತಹ ದಾರ್ಶನಿಕ ಮಿಲಿಯನ್‌ನಲ್ಲಿ ಒಬ್ಬರು. ಉದ್ಯಮಿ ಹಾಗೂ ಭಾರತೀಯ ಚಿತ್ರರಂಗದ ದಿಗ್ಗಜ, ಅವರು ನಮ್ಮೊಂದಿಗೆ ಇಲ್ಲ ಎಂಬ ಸುದ್ದಿ ತುಂಬಾ ದುಃಖಕರವಾಗಿದೆ. ‘ನಿನ್ನು ಚೂಡಾನಿ’ ಚಿತ್ರದ ಮೂಲಕ ನಾನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ ನೆನಪುಗಳನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ
ಜೂನಿಯರ್ ಎನ್​ಟಿಆರ್, ನಟ
ರಾಮೋಜಿ ರಾವ್ ನಿಜವಾದ ದಂತಕಥೆ. ತಮ್ಮ ಅದ್ಬುತ ಕೊಡುಗೆಗಳಿಂದ ಭಾರತೀಯ ಮಾಧ್ಯಮ ಮತ್ತು ಚಿತ್ರರಂಗದಲ್ಲಿ ಕ್ರಾಂತಿಯನ್ನೇ ಹುಟ್ಟುಹಾಕಿದರು.
ಸಿ.ಪಿ ರಾಧಾಕೃಷ್ಣನ್, ತೆಲಂಗಾಣ ರಾಜ್ಯಪಾಲ
ರಾಮೋಜಿ ರಾವ್ ಅವರ ನಿಧನ ತೆಲುಗು ಪತ್ರಿಕೆ ಮತ್ತು ಮಾಧ್ಯಮ ಉದ್ಯಮಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಂತಿಕುಮಾರಿಗೆ ಸೂಚಿಸಿದ್ದೇನೆ.
–ರೇವಂತ್ ರೆಡ್ಡಿ, ತೆಲಂಗಾಣ ಸಿಎಂ
ಪತ್ರಿಕೋದ್ಯಮ ಮತ್ತು ಚಲನಚಿತ್ರೋದ್ಯಮಕ್ಕೆ ರಾಮೋಜಿ ರಾವ್ ಅವರ ಕೊಡುಗೆ ಅಪಾರ
– ಎಂ.ಕೆ ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ
ರಾಮೋಜಿ ರಾವ್ ಅವರ ದೂರದೃಷ್ಟಿ ಮತ್ತು ದೃಢನಿರ್ಧಾರ ಪ್ರತಿಯೊಂದು ಕ್ಷೇತ್ರದಲ್ಲೂ ಅಳಿಸಲಾಗದ ಛಾಪು ಮೂಡಿಸಿದೆ. ಅವರು ‌‌ಎಲ್ಲರಿಗೂ ಮಾದರಿ ಮತ್ತು ಸ್ಫೂರ್ತಿ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸಂತಾಪ ಸೂಚಿಸಿದ್ದಾರೆ. ಅವರ ಆಹ್ವಾನದ ಮೇರೆಗೆ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ನೀಡಿದ್ದನ್ನು ಮಮತಾ ಸ್ಮರಿಸಿಕೊಂಡಿದ್ದಾರೆ.

ನಟ ರಜನಿಕಾಂತ್, ಚಿರಂಜೀವಿ, ಅಲ್ಲು ಅರ್ಜುನ್, ಹಲವಾರು ಪ್ರಮುಖ ಚಿತ್ರರಂಗದ ಗಣ್ಯರು ರಾಮೋಜಿ ರಾವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈಚೆಗೆ ಅನಾರೋಗ್ಯಕ್ಕೊಳಗಾಗಿದ್ದ ರಾಮೋಜಿ ರಾವ್ ಅವರನ್ನು ಹೈದರಾಬಾದ್‌ನ ಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT