ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಆಯ್ಕೆ; ನಾಳೆ ಪ್ರಮಾಣ

Published 5 ಡಿಸೆಂಬರ್ 2023, 16:25 IST
Last Updated 5 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ನವದೆಹಲಿ: ಎ. ರೇವಂತ್ ರೆಡ್ಡಿ ಅವರು ತೆಲಂಗಾಣದ ಹೊಸ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್‌ ಪ್ರಕಟಿಸಿದೆ. ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಗುರುವಾರ ನಡೆಯಲಿದೆ.

ಉಪ ಮುಖ್ಯಮಂತ್ರಿ ಸ್ಥಾನ ಒಂದು ಅಥವಾ ಅದಕ್ಕಿಂತ ಹೆಚ್ಚು ಇರಲಿದೆಯೇ ಎಂಬ ಬಗ್ಗೆ ಪಕ್ಷ ಏನನ್ನೂ ಹೇಳಿಲ್ಲ. ಸರ್ಕಾರದಲ್ಲಿ ರಾಜ್ಯದ  ಹಿರಿಯ ನಾಯಕರು ಯಾವ ಪಾತ್ರ ವಹಿಸುವರು ಎನ್ನುವುದನ್ನೂ ವಿವರಿಸಿಲ್ಲ ಆದರೆ ರೇವಂತ್‌ ಅವರ ನೇತೃತ್ವದ ಸರ್ಕಾರವು ‘ಏಕ ಮಾತ್ರ ವ್ಯಕ್ತಿಯ’ ಪ್ರದರ್ಶನ ಆಗಿರುವುದಿಲ್ಲ. ತಂಡವಾಗಿ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದೆ.

ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರೇವಂತ್‌ ಬದಲು ಹೊಸ ಅಧ್ಯಕ್ಷರ ನೇಮಕವಾಗಲಿದೆಯೆ ಎಂಬುದನ್ನೂ ವಿವರಿಸಿಲ್ಲ.

ಭಟ್ಟಿ ವಿಕ್ರಮಾರ್ಕ ಮತ್ತು ಎನ್‌. ಉತ್ತಮ್‌ ಕುಮಾರ್‌ ರೆಡ್ಡಿ ಅವರೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದರು. ವೀಕ್ಷಕರು ಸಲ್ಲಿಸಿದ ವರದಿ ಪರಿಶೀಲಿಸಿ, ಹಿರಿಯ ನಾಯಕರ ಜತೆ ಚರ್ಚಿಸಿದ ಬಳಿಕ  ರೇವಂತ್‌ ರೆಡ್ಡಿ ಅವರನ್ನು ತೆಲಂಗಾಣ ಕಾಂಗ್ರೆಸ್‌ ಶಾಸಕಾಂಗ ಪಕ್ಷದ  ನಾಯಕರಾಗಿ ನೇಮಿಸಲು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದರು.

‘ಖರ್ಗೆ, ತೆಲಂಗಾಣದ ತಾಯಿ ಸೋನಿಯಾಮ್ಮ, ಎಂದಿಗೂ ಸ್ಪೂರ್ತಿದಾಯಕ ನಾಯಕರಾಗಿರುವ ರಾಹುಲ್‌ ಗಾಂಧಿ ಅವರಲ್ಲದೆ ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್‌, ಡಿ.ಕೆ. ಶಿವಕುಮಾರ್‌, ಮಾಣಿಕ್‌ರಾವ್‌ ಠಾಕ್ರೆ ಅವರಿಗೆ ಅಲ್ಲದೆ ಪಕ್ಷದ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದು ರೇವಂತ್‌ ಹೇಳಿದ್ದಾರೆ.

64 ಶಾಸಕರ ಪೈಕಿ 50 ಮಂದಿ ರೇವಂತ್‌ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲು ಒಲವು ಸೂಚಿಸಿದ್ದಾರೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವ ಕೆ.ಜೆ. ಜಾರ್ಜ್‌, ಅಜಯ್‌ಕುಮಾರ್‌ ಮತ್ತು ದೀಪಾ ದಾಸ್‌ಮುನ್ಷಿ ಅವರನ್ನು ಒಳಗೊಂಡ ವೀಕ್ಷಕರ ತಂಡವು ವರದಿಯಲ್ಲಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಹೆಸರು ಅಂತಿಮಗೊಳಿಸುವ ಮೊದಲು ಖರ್ಗೆ ಅವರು ಪಕ್ಷದ ನಾಯಕ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್‌, ಶಿವಕುಮಾರ್‌ ಮತ್ತು ರಾಜ್ಯದ ಉಸ್ತುವಾರಿ ಮಾಣಿಕ್‌ರಾವ್‌ ಅವರ ಜತೆ ಚರ್ಚೆ ನಡೆಸಿದರು.

ನಂತರದಲ್ಲಿ ವೇಣುಗೋಪಾಲ್‌ ಅವರು ಶಿವಕುಮಾರ್ ಅವರೊಂದಿಗೆ ವಿಕ್ರಮಾರ್ಕ, ಉತ್ತಮ್‌ಕುಮಾರ್‌ ಮತ್ತು ಮಾಣಿಕ್‌ರಾವ್‌ ಅವರ ಜತೆ ಮಾತುಕತೆ ನಡೆಸಿ ಸರ್ಕಾರದಲ್ಲಿ ಮುಂದೆ ಅವರು ವಹಿಸಬೇಕಾದ ಪಾತ್ರದ ಕುರಿತು ವಿವರಿಸಿದರು ಎನ್ನಲಾಗಿದೆ.

ಸಂಪುಟ ರಚನೆಗೆ ಅಂತಿಮ ಸ್ಪರ್ಶ ನೀಡಲು ರೇವಂತ್‌ ಅವರು ದೆಹಲಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ನಿರ್ಧಾರ ಪ್ರಕಟಿಸಿದ ವೇಣುಗೋಪಾಲ್‌ ಅವರು, ‘ತೆಲಂಗಾಣದಲ್ಲಿ ಇತರ ನಾಯಕರ ಜತೆಗೂಡಿ ವ್ಯಾಪಕವಾಗಿ ಪ್ರಚಾರ ಕೈಗೊಂಡ ಕ್ರಿಯಾಶೀಲ ನಾಯಕ ರೇವಂತ್‌ ಅವರನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರಾಗಿ  ಖರ್ಗೆ ಅವರು ಆಯ್ಕೆ ಮಾಡಿದ್ದಾರೆ’ ಎಂದರು.

ರೇವಂತ್‌ ನೇತೃತ್ವದ ಸರ್ಕಾರವು ಪಕ್ಷ ಭರವಸೆ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ಕಾರ್ಯಗತಗೊಳಿಸಲಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾವು ಎಲ್ಲಾ ಹಿರಿಯ ನಾಯಕರನ್ನು ಗುರುತಿಸುತ್ತೇವೆ. ಇದು ಏಕ ವ್ಯಕ್ತಿ ಪ್ರದರ್ಶನವಲ್ಲ. ಈ ಸರ್ಕಾರ ತಂಡವಾಗಿ ಕೆಲಸ ಮಾಡಲಿದೆ’ ಎಂದು ಪ್ರತಿಕ್ರಿಯಿಸಿದರು.

ಈವರೆಗೆ ಸಿಎಲ್‌ಪಿ ನಾಯಕರಾಗಿದ್ದ, ದಲಿತ ನಾಯಕ ವಿಕ್ರಮಾರ್ಕ ಅವರು ಈಗ ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅವಿಭಜಿತ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿದ್ದ ಮತ್ತು ಈಗ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ ಕಾಯಂ  ಆಹ್ವಾನಿತರಾಗಿರುವ  ದಾಮೋದರ್‌ ರಾಜಾ ನರಸಿಂಹ ಅವರೂ ಈ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ರೇವಂತ್‌ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸುವವರ ಹೆಸರನ್ನು ಅಂತಿಮಗೊಳಿಸುವಲ್ಲಿ ನಾಯಕತ್ವ ಈಗ ಮಗ್ನವಾಗಿದೆ.

ಈ ಮೊದಲು ಸೋನಿಯಾ ಗಾಂಧಿ ಅವರ ಜನ್ಮದಿನವಾದ ಡಿ. 9ರಂದು ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ರೇವಂತ್‌ ಹೇಳಿದ್ದರು. ರಾಹುಲ್‌ ಅವರು ಶುಕ್ರವಾರದಿಂದ 7 ದಿನಗಳವರೆಗೆ ಆಗ್ನೇಯ ಏಷ್ಯಾಕ್ಕೆ ಪ್ರವಾಸ ಕೈಗೊಂಡಿರುವುದರಿಂದ ಗುರುವಾರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT