ಮುಂಬೈ: ‘ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣನಹ ಬಿಜೆಪಿ– ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರದ ಭಾಗವಾಗುವುದಾದರೆ ನಾವು ಸರ್ಕಾರದಿಂದ ಹೊರ ನಡೆಯುತ್ತೇವೆ’ ಎಂದು ಬಿಜೆಪಿಗೆ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಸಂದೇಶ ರವಾನಿಸಿದೆ.
ಬಿಜೆಪಿ ಮತ್ತು ಎನ್ಸಿಪಿಯ ಅಜಿತ್ ಪವಾರ್ ನೇತೃತ್ವದ ಬಣದ ನಡುವೆ ಮಾತುಕತೆ ನಡೆಯುತ್ತದೆ ಎಂಬ ಊಹಾಪೋಹದ ಬೆನ್ನಲ್ಲೇ ಶಿಂದೆ ಆಪ್ತ, ಶಾಸಕ ಸಂಜಯ್ ಶಿರ್ಸಾಟ್ ಹೀಗೆ ಹೇಳಿದ್ದಾರೆ.
‘ಬಿಜೆಪಿಯ ಜೊತೆ ಅಜಿತ್ ಪವಾರ್ ಮಾತುಕತೆ ನಡೆಸಿರುವ ಕುರಿತು ನಮಗೆ ವಿರೋಧವಿಲ್ಲ. ಆದರೆ ಅವರ ಬಣ ಸರ್ಕಾರದ ಭಾಗವಾದರೆ ನಾವು ಸರ್ಕಾರದಿಂದ ಹೊರಹೋಗುತ್ತೇವೆ’ ಎಂದು ಸಂಜಯ್ ಹೇಳಿದ್ದಾರೆ.
‘ಎನ್ಸಿಪಿ, ಕಾಂಗ್ರೆಸ್ ಕಾರಣಕ್ಕಾಗಿಯೇ ನಾವು ಮಹಾ ವಿಕಾಸ ಅಘಾಡಿ ಮೈತ್ರಿಕೂಟದಿಂದ ಹೊರಬಂದು ಬಿಜೆಪಿ ಜೊತೆ ಸರ್ಕಾರ ರಚಿಸಿದೆವು. ಈ ಸರ್ಕಾರದೊಳಗೆ ಎನ್ಸಿಪಿಯನ್ನೂ ತೆಗೆದುಕೊಂಡರೆ ಅದನ್ನು ಮಹಾರಾಷ್ಟ್ರ ಎಂದಿಗೂ ಒಪ್ಪುವುದಿಲ್ಲ’ ಎಂದು ಅವರು ಹೇಳಿದರು.