ನವದೆಹಲಿ: ಸಿಲ್ಕ್ಯಾರಾ ಸುರಂಗಮಾರ್ಗದಲ್ಲಿ ಅಗತ್ಯ ಸುರಕ್ಷತಾ ತಪಾಸಣೆ ನಡೆಸಿ, ಕುಸಿದ ಭಾಗವನ್ನು ದುರಸ್ತಿಗೊಳಿಸಿದ ಬಳಿಕವೇ ಯೋಜನೆಯ ಕಾಮಗಾರಿಯನ್ನು ಮುಂದುವರೆಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
‘ಸಿಲ್ಕ್ಯಾರ ಸುರಂಗಮಾರ್ಗ ಯೋಜನೆಯನ್ನು ಸಂಪೂರ್ಣವಾಗಿ ಪರಿಶೀಲನೆಗೆ ಒಳಪಡಿಸುತ್ತೇವೆ. ಜೊತೆಗೆ ಕೆಲವು ವ್ಯವಸ್ಥೆಗಳನ್ನು ಉತ್ತಮಪಡಿಸುತ್ತೇವೆ’ ಎಂದು ಸಚಿವಾಲಯದ ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಸುರಂಗ ಕುಸಿದ ಕಾರಣ ತಿಳಿಯಲು ಉತ್ತರಾಖಂಡ ಸರ್ಕಾರವು ಈಗಾಗಲೇ ತಜ್ಞರ ತಂಡವೊಂದನ್ನು ರಚಿಸಿದೆ. ಮತ್ತೊಂದು ತಂಡ ರಚಿಸಲು ಸಚಿವಾಲಯ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.