ನವದೆಹಲಿ: ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಹಿಮಾಚಲ ಪ್ರದೇಶದ ಕಾಂಗ್ರೆಸ್ ಪಕ್ಷದ ಆರು ಮಂದಿ ಅನರ್ಹ ಶಾಸಕರು ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಫೆಬ್ರುವರಿ 29ರಂದು ವಿಧಾನಸಭಾಧ್ಯಕ್ಷ ಕುಲದೀಪ್ ಪಟಾನಿಯಾ ತಮ್ಮನ್ನು ಅನರ್ಹಗೊಳಿಸಿದ್ದ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಹಾಕಿದ್ದ ಈ ಶಾಸಕರು, ವಿಧಾನಸಭೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಬಜೆಟ್ ಅನುಮೋದನೆ ಮೇಲಿನ ಮತದಾನಕ್ಕೂ ಗೈರಾಗಿದ್ದರು. ಈ ಎರಡೂ ಕಾರಣಗಳನ್ನು ಮುಂದಿಟ್ಟಿದ್ದ ಕಾಂಗ್ರೆಸ್, ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿತ್ತು.
ರಾಜಿಂದರ್ ರಾಣಾ, ಸುಧೀರ್ ಶರ್ಮಾ, ಇಂದೇರ್ ದತ್ ಲಖನ್ಪಾಲ್, ದೇವಿಂದರ್ ಕುಮಾರ್ ಭಟೂ, ರವಿ ಠಾಕೂರ್ ಮತ್ತು ಚೈತನ್ಯ ಶರ್ಮಾ ಅನರ್ಹಗೊಂಡ ಶಾಸಕರು.
6 ಶಾಸಕರನ್ನು ಅನರ್ಹಗೊಳಿಸಿದ ಬಳಿಕ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಶಾಸಕರ ಬಲ 68ರಿಂದ 62ಕ್ಕೆ ಕುಸಿದರೆ, ಕಾಂಗ್ರೆಸ್ ಶಾಸಕರ ಸಂಖ್ಯೆ 40ರಿಂದ 34ಕ್ಕೆ ಬಂದಿದೆ.