ಥಾಣೆ: ಮಹಾರಾಷ್ಟ್ರದ ಥಾಣೆಯ ಪಾಲಿಕೆಯಲ್ಲಿ ಕಸ ಗುಡಿಸುವ ಪೌರ ಕಾರ್ಮಿಕ ಮಹಿಳೆಯ ಮಗ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್ಸಿ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
32 ವರ್ಷದ ಪ್ರಶಾಂತ್ ಸುರೇಶ್ ಭೋಜನೆ ಈ ಸಾಧನೆ ಮಾಡಿದ್ದು, ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡುವುದು ನನ್ನ ಕನಸಾಗಿತ್ತು ಎಂದು ಹೇಳಿದ್ದಾರೆ.
ಕುಟುಂಬದ ಎಲ್ಲ ಆರ್ಥಿಕ ಸಮಸ್ಯೆಗಳನ್ನು ಮೆಟ್ಟಿ ನಿಂತ ಪ್ರಶಾಂತ್ ಗುರಿ ಸಾಧಿಸಿದ್ದಾರೆ.
ಮಂಗಳವಾರ ಹೊರಬಿದ್ದ ಯುಪಿಎಸ್ಸಿ ಫಲಿತಾಂಶದಲ್ಲಿ ಪ್ರಶಾಂತ್ 849ನೇ ರ್ಯಾಂಕ್ ಪಡೆದಿದ್ದಾರೆ.
2015ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಅವರು ಈಗ 9ನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಪೌರ ಕಾರ್ಮಿಕ ಮಹಿಳೆಯ ಮಗನ ಸಾಧನೆಯನ್ನು ಕೊಂಡಾಡಿದ ಖರ್ತಾರ್ ರಸ್ತೆಯ ಸ್ವೀಪರ್ಸ್ ಕಾಲೊನಿಯ ಸ್ಥಳೀಯರು, ಬುಧವಾರ ರಾತ್ರಿ ಸಂಭ್ರಮಾಚರಣೆ ಮಾಡಿದರು. ಕೆಲ ಸ್ಥಳೀಯ ರಾಜಕಾರಣಿಗಳು ಸಹ ಭಾಗಿಯಾಗಿದ್ದರು.
ಥಾಣೆ ಪಾಲಿಕೆಯಲ್ಲಿ ತಾಯಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರೆ, ತಂದೆ ಡಿ ದರ್ಜೆ ನೌಕರರಾಗಿದ್ದಾರೆ.
ಎಂಜಿನಿಯರಿಂಗ್ ಓದಿರುವ ಪ್ರಶಾಂತ್, ಅದರಲ್ಲಿ ಮುಂದುವರಿಯಲು ಇಷ್ಟವಿಲ್ಲದೆ ಶ್ರಮಪಟ್ಟು ಐಎಎಸ್ ಪಾಸ್ ಮಾಡಿದ್ದಾರೆ.
ದೆಹಲಿಯಲ್ಲಿ ಕೆಲಸ ಮಾಡಿಕೊಂಡೇ ಐಎಎಸ್ ಕೋಚಿಂಗ್ ಪಡೆಯುತ್ತಿದ್ದೆ. ನನ್ನ ಸಂಪೂರ್ಣ ಖರ್ಚಿನ ಹಣವನ್ನು ಸಂಪಾದಿಸುತ್ತಿದ್ದೆ. ಪ್ರತಿ ಪ್ರಯತ್ನದಲ್ಲೂ ಸೋಲಾಗುತ್ತಿದ್ದಾಗ ಪೋಷಕರು ಮನೆಗೆ ಹಿಂದಿರುಗುವಂತೆ ಸೂಚಿಸಿದ್ದರು. ಆದರೆ, ಹಠ ಬಿಡದೆ ಸತತ ಪ್ರಯತ್ನ ಪಟ್ಟೆ. ಅದರ ಫಲ ಈಗ ಸಿಕ್ಕಿದೆ ಎಂದು ಪ್ರಶಾಂತ್ ಹೇಳಿದ್ದಾರೆ.
ನನ್ನ ಮಗ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಅತ್ಯಂತ ಸಂತಸ ತಂದಿದೆ. ಅವನು ಆ ಪ್ರಯತ್ನ ಬಿಟ್ಟು ಯಾವುದೊ ಒಂದು ಕೆಲಸ ನೋಡಿಕೊಳ್ಳಬೇಕು ಎಂಬುದು ನನ್ನ ಭಾವನೆಯಾಗಿತ್ತು. ಅವನ ನಿರ್ಧಾರ ಸೂಕ್ತವಾಗಿತ್ತು ಎಂದು ಈಗ ನನಗೆ ಅನಿಸುತ್ತಿದೆ ಎಂದು ತಂದೆ ಸುರೇಶ್ ಭೋಜನೆ ಹೇಳಿದ್ದಾರೆ.
.