ಚೆನ್ನೈ: ಇಡೀ ಚೆನ್ನೈನ ನಗರವೇ ನೀರಿಲ್ಲದೇ ತತ್ತರಿಸಿರುವ ಹೊತ್ತಿನಲ್ಲೇ ಸೂಪರ್ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ ಅವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿರುವ ಚಿತ್ರವೊಂದುವಿವಾದಕ್ಕೆ ಕಾರಣವಾಗಿಯಿತು.ಕೂಡಲೇ ಇದರಿಂದ ಎಚ್ಚೆತ್ತುಕೊಂಡ ಸೌಂದರ್ಯ ಫೊಟೊವನ್ನು ಡಿಲೀಟ್ ಮಾಡಿ, ಸಮಜಾಯಿಷಿಯನ್ನೂ ನೀಡಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಸಾಮಾಜಿಕ ತಾಣ ಟ್ವಿಟರ್ನಲ್ಲಿ ಸೌಂದರ್ಯ ಜನಿಕಾಂತ್ ಅವರು ತಮ್ಮ ಕೆಲವು ಫೊಟೊಗಳನ್ನು ಪ್ರಕಟಿಸಿದ್ದರು.ತಮ್ಮ ಪುತ್ರನೊಂದಿಗೆ ಈಜುಕೊಳದಲ್ಲಿ ಆಟವಾಡುತ್ತಿರುವ ಸನ್ನಿವೇಶದ ಚಿತ್ರವೊಂದೂ ಅದರಲ್ಲಿತ್ತು. ಈಜುಕೊಳದಲ್ಲಿ ಆಟವಾಡುತ್ತಿರುವ ಚಿತ್ರ ಚೆನ್ನೈನ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಯಿತು. ‘ಚೆನ್ನೈ ನಗರ ನೀರಿಲ್ಲದೇ ಪರಿತಪಿಸುತ್ತಿರುವಾಗ ಈ ಫೊಟೊವನ್ನು ಹಂಚಿಕೊಂಡಿರುವುದು ಸರಿಯಲ್ಲ. ಇದು ಸೂಕ್ತ ಸಮಯವಲ್ಲ,’ ಎಂದು ಜನ ನೆನಪಿಸಲಾರಂಭಿಸಿದರು. ಇದೇ ಹಿನ್ನೆಲೆಯಲ್ಲಿ ಸೌಂದರ್ಯ ಅವರು ಈಜುಕೊಳದ ಚಿತ್ರವನ್ನು ಡಿಲಿಟ್ ಮಾಡಿದರು.
ಫೊಟೊ ಡಿಲಿಟ್ ಮಾಡಿದ್ದಕ್ಕೆ ಸೌಂದರ್ಯ ಅವರು ಸಮಜಾಯಿಷಿಯನ್ನೂ ನೀಡಿದ್ದಾರೆ. ನನ್ನ ಪ್ರವಾಸದ ಕೆಲ ಚಿತ್ರಗಳನ್ನು ನಾನು ಉತ್ತಮ ಉದ್ದೇಶದಿಂದಲೇ ಹಂಚಿಕೊಂಡಿದ್ದೆ. ಆದರೆ, ಚೆನ್ನೈ ನಗರ ಸದ್ಯ ಅನುಭವಿಸುತ್ತಿರುವ ಸನ್ನಿವೇಶದ ಸೂಕ್ಷ್ಮತೆಯನ್ನು ಅರಿತು ಅದನ್ನು ಈಗ ಡಿಲಿಟ್ ಮಾಡಿದ್ದೇನೆ. ಮಕ್ಕಳ ಬಾಲ್ಯದ ದೈಹಿಕ ಚಟುವಟಿಕೆಯ ಅಗತ್ಯವನ್ನು ತಿಳಿಸಲೆಂದೇ ನಾನು ನನ್ನ ಮಗನ ಜತೆಗೆ ಈಜುಕೊಳದಲ್ಲಿದ್ದ ಚಿತ್ರನನ್ನು ಪ್ರಕಟಿಸಿದ್ದೆ ಎಂದು ಅವರು ಬರೆದುಕೊಂಡು ವಿವಾದಕ್ಕೆ ಕೊನೆ ಹಾಡಿದ್ದಾರೆ.
Removed the pictures shared in good spirit from my #TravelDiaries considering the sensitivity around the current #WaterScarcity we are facing 🙏🏻. The throwback pics were to emphasise the importance for physical activities for children from a young age only 🙂🙏🏻 #LetsSaveWater
— soundarya rajnikanth (@soundaryaarajni) June 30, 2019
ಚೆನ್ನೈನಲ್ಲಿ ನೀರಿನ ಬವಣೆ ಎದುರಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿನಡೆಸಿದ್ದ ನಟ ರಜನಿಕಾಂತ್, ‘ಮಳೆ ನೀರು ಸಂಗ್ರಹಿಸಲು ನಾವು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಮುಂಗಾರು ಆರಂಭಕ್ಕೂಮೊದಲೇ ಕೆರೆ, ಕಾಲುವೆಗಳ ಹೂಳೆತ್ತಬೇಕು,’ ಎಂದು ನೀರಿನ ಸಂರಕ್ಷಣೆ ಕುರಿತು ಮಾತನಾಡಿದ್ದರು.
ಸೌಂದರ್ಯ ಅವರು ರಜನಿಕಾಂತ್ ಅವರ ಹಿರಿಯ ಪುತ್ರಿ. ಇದೇ ವರ್ಷದ ಜನವರಿಯಲ್ಲಿ ಅವರು ವಿಶಾಖನ್ ಎಂಬುವವರೊಂದಿಗೆ ಎರಡನೇ ಮದುವೆಯಾದರು. ಇದಕ್ಕೂ ಮೊದಲು ಸೌಂದರ್ಯ ಆರ್. ಅಶ್ವಿನ್ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮೂರು ವರ್ಷದ ಮುಗುವಿದೆ. ಸೌಂದರ್ಯ ವೃತ್ತಿಯಿಂದ ಗ್ರಾಫಿಕ್ ಡಿಸೈನರ್. ತಮ್ಮ ತಂದೆಯ ‘ಕೊಚಾಡಿಯನ್’ ಮತ್ತು ಸೋದರಿಯ ಪತಿ ಧನುಷ್ ಅವರ‘ವೇಲೆಯಿಲ್ಲಾ ಪಟ್ಟದಾರಿ–2’ ಅನ್ನು ಅವರೇ ನಿರ್ದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.