ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಿ ಮಾಲಿವಾಲ್ ಪ್ರಕರಣ: ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಜಾಮೀನು ಅರ್ಜಿ ವಜಾ

Published 27 ಮೇ 2024, 13:12 IST
Last Updated 27 ಮೇ 2024, 13:12 IST
ಅಕ್ಷರ ಗಾತ್ರ

ನವದೆಹಲಿ: ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್‌ ಮೇಲೆ ಹಲ್ಲೆ ಮಾಡಿದ ಆರೋಪ ಹೊತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. 

ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಧೀಶ ಗೌರವ್‌ ಗೋಯಲ್‌ ಅವರು ಸೋಮವಾರ ತನ್ನ ತೀರ್ಪನ್ನು ಪ್ರಕಟಿಸಿದ್ದು, ಬಿಭವ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು. 

ವಿಚಾರಣೆ ವೇಳೆ ಸ್ವಾತಿ ಅವರು, ತಮ್ಮ ವಕೀಲರ ಮೂಲಕ ‘ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಎಎಪಿ ನಾಯಕರು ನನ್ನನ್ನು ಬಿಜೆಪಿ ಏಜೆಂಟ್‌ ಎಂದು ಕರೆಯುತ್ತಿದ್ದಾರೆ. ಎಎಪಿಯು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗಳ ಅತಿದೊಡ್ಡ ಯಂತ್ರವನ್ನು ಹೊಂದಿದೆ. ಬಿಭವ್‌ ಬಿಡುಗಡೆಯಾದರೆ ತಮಗೆ ಜೀವ ಬೆದರಿಕೆ ಇದೆ ಹಾಗೂ ತಮ್ಮ ಕುಟುಂಬಕ್ಕೆ ಗಂಭೀರ ಅಪಾಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಘಟನೆ ಕುರಿತು ಯ್ಯೂಟೂಬರ್‌ವೊಬ್ಬರು, ಏಕಪಕ್ಷೀಯವಾದ ವಿಡಿಯೊವೊಂದನ್ನು ಮಾಡಿದ್ದಾರೆ. ಬಳಿಕ ನನಗೆ ಬೆದರಿಕೆಗಳು ಬರಲಾರಂಭಿಸಿವೆ ಎಂದರು.

ಮೇ 13ರಂದು ನಾನು ಮುಖ್ಯಮಂತ್ರಿ ಕೇಜ್ರಿವಾಲ್‌ ಅವರ ನಿವಾಸಕ್ಕೆ ತೆರಳಿದಾಗ ನನ್ನ ಮೇಲೆ ಬಿಭವ್‌ ಹಲ್ಲೆ ಮಾಡಿದ್ದಾರೆ ಎಂದು ಸ್ವಾತಿ ಆರೋಪಿಸಿದ್ದಾರೆ. ಮೇ 13ನೇ ದಿನಾಂಕದಂದು ಸ್ವಾತಿ ಅವರು ಕೇಜ್ರಿವಾಲ್‌ ನಿವಾಸದಲ್ಲಿರುವ ಕೆಲ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ವಿಡಿಯೊವೊಂದರಲ್ಲಿ ಸ್ವಾತಿ ಅವರು ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದದಲ್ಲಿ ತೊಡಗಿದ್ದರೆ, ಮತ್ತೊಂದರಲ್ಲಿ ಅವರು ನಿವಾಸದಿಂದ ಹೊರನಡೆಯುತ್ತಿರುವ ದೃಶ್ಯವಿದೆ. 

ಕುಮಾರ್‌ ಅವರು ಬಂಧಿತರಾಗಿದ್ದರೂ ಸ್ವಾತಿ ಅವರಿಗೆ ಬೆದರಿಕೆಗಳು ಬರುತ್ತಿವೆ. ಅಲ್ಲದೇ ಅವರು ಘಟನೆಯ ದಿನದ ಸಿಸಿಟಿವಿ ದೃಶ್ಯಾವಳಿಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಸ್ವಾತಿ ಪರ ವಕೀಲರು ಆರೋಪಿಸಿದರು.

ಕುಮಾರ್‌ ಅವರು ಯಾವುದೇ ಸಾಕ್ಷ್ಯಗಳನ್ನು ನಾಶ ಮಾಡುವ ಸಾಧ್ಯತೆ ಇಲ್ಲ ಹಾಗೂ ಅವರು ಪೊಲೀಸರ ತನಿಖೆಗೆ ಸಹಕರಿಸಿದ್ದಾರೆ ಎಂದು ಕುಮಾರ್‌ ಪರ ವಕೀಲರು ವಾದ ಮಂಡಿಸಿದರು.

ಹೈಕೋರ್ಟ್‌ ಮೊರೆ: ನಗರ ನ್ಯಾಯಾಲಯವು ತಮ್ಮ ಜಾಮೀನು ಅರ್ಜಿಯನ್ನು ತಿರಸ್ಕೃತಗೊಳಿಸಿರುವುದನ್ನು ಪ್ರಶ್ನಿಸಿ ಬಿಭವ್‌ ಕುಮಾರ್‌ ಹೈಕೋರ್ಟ್‌ ಮೆಟ್ಟಿಲೆರಲಿದ್ದಾರೆ ಎಂದು ಎಎಪಿ ಸೋಮವಾರ ತಿಳಿಸಿದೆ.

‘ಬಿಭವ್‌ ಸಾಮಾನ್ಯ ವ್ಯಕ್ತಿಯಲ್ಲ’
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಬಿಭವ್‌ ಕುಮಾರ್‌ ವಿರುದ್ಧ ಸ್ವಾತಿ ಅನೇಕ ಆರೋಪಗಳನ್ನು ಮಾಡಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರು ತಮ್ಮ ಸಹಾಯಕ ಬಿಭವ್‌ ಕುಮಾರ್‌ ಅವರನ್ನು ರಕ್ಷಿಸುತ್ತಿದ್ದಾರೆ. ಕೇಜ್ರಿವಾಲ್‌ ಆರೋಪಿಗಳೊಂದಿಗೆ (ಬಿಭವ್‌) ತಿರುಗಾಡುತ್ತಾರೆ ಮತ್ತು ಅವರನ್ನು ಲಖನೌ ಹಾಗೂ ಇತರ ಸ್ಥಳಗಳಿಗೆ ಕರೆದೊಯ್ಯುತ್ತಿದ್ದಾರೆ. ನನ್ನ ವಿರುದ್ಧ ನಿಲ್ಲುವಂತೆ ಎಲ್ಲಾ ಪಕ್ಷಗಳ ನಾಯಕರಿಗೆ ಎಚ್ಚರಿಕೆ ನೀಡಲಾಗಿದೆ.  ಬಿಭವ್‌ ಸಾಮಾನ್ಯ ವ್ಯಕ್ತಿಯಲ್ಲ. ಸಚಿವರಿಗೂ ಸಿಗದ ಸೌಲಭ್ಯಗಳನ್ನು ಅವರು ಪಡೆಯುತ್ತಾರೆ. ಅವರು ಹೊರಬಂದರೆ ನನ್ನ ಕುಟುಂಬದ ಜೀವಕ್ಕೆ ಅಪಾಯವಿದೆ ಎಂದಿದ್ದಾರೆ. 

‘ಸಿಎಂ ನಿವಾಸಕ್ಕೆ ಸ್ವಾತಿ ಬಂದ ಬಳಿಕ ಬಿಭವ್‌ನ ಕರೆಯಲಾಗಿದೆ’

ಸ್ವಾತಿ ಮಲಿವಾಲ್ ಅವರು ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದ ನಂತರ ಬಿಭವ್ ಕುಮಾರ್ ಅವರನ್ನು ಅಲ್ಲಿಗೆ ಕರೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಯಾರ ನಿರ್ದೇಶನದ ಮೇರೆಗೆ ಬಿಭವ್ ಅಲ್ಲಿಗೆ ಬಂದರು ಎಂಬುದನ್ನು ಪತ್ತೆ ಮಾಡಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಸಂಬಂಧಿತ ವ್ಯಕ್ತಿಗಳ ಕರೆ ವಿವರಗಳ ದಾಖಲೆಗಳನ್ನು ತೆಗೆದುಕೊಂಡು ತನಿಖೆ ನಡೆಸುವಂತೆ ಮಹಿಳಾ ಆಯೋಗವು ದೆಹಲಿ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದೆ.

ಅಲ್ಲದೇ ಸ್ವಾತಿ ಅವರಿಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯೊಡ್ಡುತ್ತಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಯೋಗವು ಒತ್ತಾಯಿಸಿದೆ. ಐ‍ಪಿಸಿ ಸೆಕ್ಷನ್‌ 1860ರ ಆರೋಪ ಹೊರಿಸಿ ಮೂರು ದಿನಗಳೊಳಗಾಗಿ ತನಿಖೆಯ ಸಮಗ್ರ ವರದಿ ನೀಡುವಂತೆ ಕೋರಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT