ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣ | ಅಧಿಕಾರಕ್ಕೆ ಬಂದ 30 ನಿಮಿಷದಲ್ಲಿ ಹೈದರಾಬಾದ್ ಹೆಸರು ಬದಲು: ಹಿಮಂತ

Published 23 ನವೆಂಬರ್ 2023, 4:31 IST
Last Updated 23 ನವೆಂಬರ್ 2023, 4:31 IST
ಅಕ್ಷರ ಗಾತ್ರ

ಹೈದರಾಬಾದ್: ಮುಂದಿನ ವರ್ಷ ಫೆಬ್ರುವರಿ ತಿಂಗಳಿನಲ್ಲಿ ತಮ್ಮ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಅಲ್ಲದೆ ಒಂದು ವೇಳೆ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇವಲ 30 ನಿಮಿಷದಲ್ಲಿ ಹೈದರಾಬಾದ್‌ ಅನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುತ್ತೇವೆ ಎಂದು ಹೇಳಿದ್ದಾರೆ.

ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದಲು ಬಿಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ತ್ರಿವಳಿ ತಲಾಖ್‌ ನಿಷೇಧ ಮಾಡಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ, ಮೊದಲ ಪತ್ನಿಯಿಂದ ಕಾನೂನಾತ್ಮಕವಾಗಿ ದೂರವಾಗದೆ ಎರಡನೇ ಮದುವೆ ಆಗಲು ಆಗದು ಎಂದು ಅವರು ಹೇಳಿದ್ದಾರೆ.

ಇಲ್ಲಿನ ಚಾರ್‌ಮಿನಾರ್‌ನಲ್ಲಿ ನಡೆದ ಚುನಾವಣಾ ಪ‍್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಹಾಗೂ ಬಿಆರ್‌ಎಸ್‌ ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುವ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿದ ಅವರು, ತುಷ್ಠೀಕರಣದ ರಾಜಕಾರಣ ಇಲ್ಲದಿರುವುದರಿಂದಲೇ ದೇಶ ಇಂದು ಬದಲಾಗುತ್ತಿದೆ ಎಂದಿದ್ದಾರೆ.

‘ಬಿಆರ್‌ಎಸ್‌ ಹಾಗೂ ಕಾಂಗ್ರೆಸ್‌ನ ಹಾಗೆ ನಾವು ಒಂದು ವರ್ಗವನ್ನು ಮಾತ್ರವಲ್ಲ, ಇಡೀ ದೇಶದವನ್ನು ಬದಲಾಯಿಸುತ್ತೇವೆ. ತೆಲಂಗಾಣದಲ್ಲಿ ಬಿಜೆಪಿ ಬದಲಾವಣೆಯಲ್ಲಿ ತರಲಿದೆ’ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ಮದರಸಾಗಳಿಗೆ ಭೇಟಿ ನೀಡಿದಾಗ, ಅಲ್ಲಿನ ವಿದ್ಯಾರ್ಥಿಗಳು ವೈದ್ಯರಾಗಬೇಕು ಹಾಗೂ ಎಂಜಿನಿಯರ್‌ ಆಗಬೇಕು ಎಂದು ನನ್ನ ಬಳಿ ಹೇಳಿದ್ದರು. ಆದರೆ ಆವರ ಆಸೆಗಳನ್ನು ಪೂರೈಸಲು ಮದರಸಾಗಳಲ್ಲಿ ಬೇಕಾದ ಶಿಕ್ಷಣ ನೀಡಲಾಗುತ್ತಿಲ್ಲ ಎಂದು ಪೋಷಕರಿಗೆ ನಾವು ಮನವರಿಕೆ ಮಾಡಿದೆವು. ನಾವು ಮದರಸಾದ ಪುಸ್ತಕಗಳನ್ನು ಬದಲಾಯಿಸಿದೆವು. ಈಗ ಅವರೆಲ್ಲಾ ಸಂತೋಷದಿಂದ್ದಾರೆ. ಅಭಿವೃದ್ಧಿ ಎಂದರೆ ಸಬ್‌ ಕಾ ಸಾಥ್ ಸಭ್‌ ಕಾ ವಿಕಾಸ್‌’ ಎಂದು ಹಿಮಂತ ಹೇಳಿದ್ದಾರೆ.

ಮಾಲಕ್‌ಪೇಟ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಫೆಬ್ರವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಲಿದೆ. ಗಲಭೆಯಾಗಲಿದೆ ಎಂದು ನೆಹರೂ, ಇಂದಿರಾ, ರಾಜೀವ್‌ ಹಾಗೂ ಮನಮೋಹನ್‌ ಸಿಂಗ್‌ ಅವರು ಇದನ್ನು ಮಾಡಿರಲಿಲ್ಲ ಎಂದು ನುಡಿದಿದ್ದಾರೆ.

’ಮೋದಿ ಭೂಮಿಪೂಜೆ ಮಾಡಿದರು. ಈಗ ದೇಗುಲ ಉದ್ಘಾಟನೆಗೊಳ್ಳುತ್ತಿದೆ. ಏನಾದರೂ ಗಲಭೆಗಳು ನಡೆದಿವೆಯಾ? ಎಂದು ಪ್ರಶ್ನಿಸಿದ ಅವರು, ಮೋದಿಯಂಥ ನಾಯಕ ಇರುವಾಗ ಗಲಭೆ ಮಾಡುವ ಧೈರ್ಯ ಜನರಿಗೆ ಇಲ್ಲ ಎಂದು ಅವರು ಹೇಳಿದ್ದಾರೆ.

ಇನ್ನು ಹಮಾಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದ ಎಐಎಐಎಂ ನಾಯಕ ಅಸಾದುದ್ದೀನ್ ಓವೈಸಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ‘ಅವರಿಗೆ ಬೇಕಾದ ದಾಖಲೆ ನಾವು ಸಿದ್ದಪಡಿಸಿ ಕೊಡುತ್ತೇವೆ. ಅವರು ಗಾಜಾಗೆ ತೆರಳಿ ಹಮಾಸ್‌ ವಿರುದ್ಧ ಹೋರಾಟ ಮಾಡಬಹುದು. ಆದರೆ ಅವರು ಹೋಗುವುದಿಲ್ಲ. ಹೈದರಾಬಾದ್‌ ಸುರಕ್ಷಿತ ಪ್ರದೇಶ ಎಂದು ಅವರಿಗೆ ಗೊತ್ತಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್‌ ಅವರಿಗೆ ಬೆಂಬಲ ನೀಡುತ್ತಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT