ಹೈದರಾಬಾದ್: ಪರೀಕ್ಷೆಗೆ ಹಾಜರಾಗುವ ಮುನ್ನ ಬುರ್ಖಾ ತೆಗೆಯುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಿ ಕಾಲೇಜು ಆಡಳಿತದ ವಿರುದ್ಧ ತೆಲಂಗಾಣದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದಾರೆ.
ಸಂತೋಷ್ ನಗರದಲ್ಲಿರುವ ಕೆ.ವಿ. ರಂಗಾ ರೆಡ್ಡಿ ಪದವಿ ಕಾಲೇಜಿನಲ್ಲಿ ಮಧ್ಯಂತರ ಪೂರಕ ಪರೀಕ್ಷೆ ವೇಳೆ ಈ ಪ್ರಕರಣ ವರದಿಯಾಗಿದೆ.
ಕಾಲೇಜಿನಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿ ಬುರ್ಖಾಧಾರಿ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿರುವುದು ವಿದ್ಯಾರ್ಥಿನಿರು ಮತ್ತು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಡ್ಡಾಯವಾಗಿ ಬುರ್ಖಾ ತೆಗೆದು ಪರೀಕ್ಷೆಗೆ ಹಾಜರಾಗಬೇಕು ಎಂಬ ನಿಯಮ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಇಲ್ಲ. ಆದರೆ, ಇಲ್ಲಿ (ಕೆ.ವಿ. ರಂಗಾ ರೆಡ್ಡಿ ಕಾಲೇಜಿನಲ್ಲಿ) ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
'ಪುರುಷ ಸಿಬ್ಬಂದಿಯ ಮುಂದೆಯೇ ಬುರ್ಖಾ ತೆಗೆಯುವಂತೆ ನಮ್ಮನ್ನು ಒತ್ತಾಯಿಸಲಾಯಿತು. ಸ್ವಲ್ಪ ಸಮಯ ನೀಡುವಂತೆ ಮನವಿ ಮಾಡಿದರೂ ಕಾಲೇಜು ಆಡಳಿತ ಪರಿಗಣಿಸಲಿಲ್ಲ' ಎಂದು ವಿದ್ಯಾರ್ಥಿನಿಯೊಬ್ಬರು ದೂರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಅಲಿ, 'ಕೆಲವು ಮುಖ್ಯ ಶಿಕ್ಷಕರು ಅಥವಾ ಪ್ರಾಂಶುಪಾಲರು ಈ ರೀತಿ ಮಾಡುತ್ತಿದ್ದಾರೆ. ಆದರೆ, ಸಂಪೂರ್ಣವಾಗಿ ಜಾತ್ಯತೀತವಾಗಿರುವುದು ನಮ್ಮ ಧೋರಣೆ' ಎಂದು ಸ್ಪಷ್ಟಪಡಿಸಿದ್ದಾರೆ.
'ಜನರು ತಾವು ಬಯಸಿದ ಬಟ್ಟೆಗಳನ್ನು ತೊಡಬಹುದು. ಆದರೆ, ಯುರೋಪಿಯನ್ನರ ಉಡುಪುಗಳನ್ನು ಧರಿಸುವುದು ಸರಿಯಲ್ಲ. ನಾವು ಭಾರತೀಯ ವಸ್ತ್ರಗಳನ್ನೇ ಧರಿಸಬೇಕು. ಬುರ್ಖಾ ಹಾಕಿಕೊಳ್ಳಬಾರದು ಎಂದು ಎಲ್ಲಿಯೂ ಬರೆದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ' ಎಂದು ಭರವಸೆ ನೀಡಿದ್ದಾರೆ.