ನವದೆಹಲಿ: ನಗರದಲ್ಲಿ ಚಳಿಯಿಂದಾಗಿ 203 ಮಂದಿ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಮಾಡಿದ್ದ ಆರೋಪ ಕುರಿತ ತನಿಖೆಯ ಹೊಣೆಯನ್ನು ಹಕ್ಕು ಬಾಧ್ಯತಾ ಸಮಿತಿಗೆ ದೆಹಲಿ ವಿಧಾನಸಭೆಯು ಸೋಮವಾರ ವಹಿಸಿದೆ.
ದೆಹಲಿ ಪೊಲೀಸರ ವರದಿಯನ್ನು ಉಲ್ಲೇಖಿಸಿ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ರಾಮ್ವೀರ್ ಸಿಂಗ್ ಬಿಧುರಿ, ಚಳಿಯಿಂದಾಗಿ ಮೃತಪಟ್ಟವರ ಅಂಕಿ–ಅಂಶಗಳನ್ನು ಹಂಚಿಕೊಂಡಿದ್ದರು.
ಇದಕ್ಕೆ ಸದನದಲ್ಲಿ ಉತ್ತರಿಸಿದ ಎಎಪಿ ಶಾಸಕ ಸಂಜೀವ್ ಝಾ, ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ವೈಬ್ಸೈಟ್ ಅನ್ನು ಪರಿಶೀಲಿಸಿದ್ದೇವೆ. ಜೂನ್– ಡಿಸೆಂಬರ್ 15ರವರೆಗೆ ನಾಲ್ಕು ತಿಂಗಳಲ್ಲಿ ಮೃತಪಟ್ಟ ನಿರಾಶ್ರಿತರ ಅಂಕಿ–ಅಂಶವನ್ನು ನೀಡಲಾಗಿದೆ. ಅಪಘಾತ ಸೇರಿದಂತೆ ಇತರೆ ಅಂಶಗಳು ಸಾವಿಗೆ ಕಾರಣವಾಗಿದೆ ಎಂಬುದನ್ನು ಅಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
ಮುಂದುವರಿದು, ಬಿಜೆಪಿಯು ಸದನ ಮತ್ತು ನಗರದ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ. ಇದು ಸೂಕ್ಷ್ಮ ವಿಚಾರವಾಗಿದ್ದು, ತನಿಖೆಯನ್ನು ಹಕ್ಕು ಬಾಧ್ಯತಾ ಸಮಿತಿಗೆ ವಹಿಸಬೇಕು ಎಂದು ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರನ್ನು ಒತ್ತಾಯಿಸಿದರು.
ಬಳಿಕ ಗೋಯಲ್ ಅವರು ಈ ಪ್ರಸ್ತಾವನೆಯನ್ನು ಸದನದಿಂದ ಮುಂದಿಟ್ಟರು. ಅದಕ್ಕೆ ಒಪ್ಪಿಗೆ ಲಭಿಸಿತು.