ನವದೆಹಲಿ: ಸಂಘರ್ಷ ಪೀಡಿತ ಮಣಿಪುರದಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಲಿರುವ ‘ಇಂಡಿಯಾ’ ಮೈತ್ರಿಕೂಟದ ನಿಯೋಗ, ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಮತ್ತು ಸಂಸತ್ತಿಗೆ ಶಿಫಾರಸುಗಳನ್ನು ಮಾಡಲಿದೆ ಎಂದು ವಿರೋಧ ಪಕ್ಷದ ನಾಯಕರು ಶುಕ್ರವಾರ ಹೇಳಿದ್ದಾರೆ.
ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಸಂಸದರು, ಪ್ರತಿನಿಧಿಗಳ ನಿಯೋಗ ಶನಿವಾರ ಮಣಿಪುರಕ್ಕೆ ಭೇಟಿ ನೀಡಲಿದೆ. ಜುಲೈ 30ರವರೆಗೆ ಪರಿಸ್ಥಿತಿಯ ಪರಾಮರ್ಶೆ ನಡೆಸಲಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ, ಗೌರವ್ ಗೊಗೊಯಿ, ಟಿಎಂಸಿಯ ಸುಶ್ಮಿತಾ ದೇವ್, ಜೆಎಂಎಂನ ಮಹುವಾ ಮಜ್ಹಿ, ಡಿಎಂಕೆಯ ಕನಿಮೋಳಿ, ಎನ್ಸಿಪಿಯ ವಂದನಾ ಚೌಹಾಣ್, ಆರ್ಎಲ್ಡಿಯ ಜಯಂತ್ ಚೌದರಿ, ಆರ್ಜೆಡಿಯ ಮನೋಜ್ ಕುಮಾರ್, ಆರ್ಎಸ್ಪಿಯ ಎನ್. ಕೆ ಪ್ರೇಮಚಂದ್ರನ್ ಮತ್ತು ವಿಸಿಕೆಯ ತಿರುಮಾವಳನ್ ನಿಯೋಗದಲ್ಲಿ ಇರಲಿದ್ದಾರೆ.
ನಿಯೋಗವು ಶನಿವಾರ ಬೆಳಿಗ್ಗೆ ಮಣಿಪುರಕ್ಕೆ ತೆರಳಲಿದೆ. ಅಲ್ಲಿ ಏನಾಗಿದೆ, ಸಂಘರ್ಷಕ್ಕೆ ಕಾರಣಗಳು ಏನು? ಉಂಟಾಗಿರುವ ನಷ್ಟ, ಜೀವ ಹಾನಿಯ ಕುರಿತು ಮಾಹಿತಿ ಕಲೆ ಹಾಕಲಿದೆ ಎಂದು ಡಿಎಂಕೆ ನಾಯಕ ಟಿ.ಆರ್ ಬಾಲು ಹೇಳಿದ್ದಾರೆ.
ಈ ಮಧ್ಯೆ ಲೋಕಸಭೆಯಲ್ಲಿ ಕಾಂಗ್ರೆಸ್ ಉಪ ನಾಯಕರಾದ ಗೌರವ್ ಗೊಗೊಯಿ, ‘ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.