ಅಯೋಧ್ಯೆ: ಇಲ್ಲಿನ ರಾಮ ಮಂದಿರ ಪ್ರವೇಶಕ್ಕೂ ಮುನ್ನ ಸ್ನಾನಕ್ಕೆಂದು ಸರಯೂ ನದಿಗೆ ಇಳಿದ ಓರ್ವ ಅಪ್ರಾಪ್ತ ಸೇರಿ ಕಾನ್ಪುರ ಮೂಲದ ಮೂವರು ಸ್ನೇಹಿತರು ನೀರು ಪಾಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿ ಮಿಶ್ರಾ (20), ಪ್ರಿಯಾಂಶು ಸಿಂಗ್ (16) ಹಾಗೂ ಹರ್ಷಿತ್ ಅವಸ್ಥಿ (18) ಮೃತರು. ರಾಮ ಮಂದಿರ ದರ್ಶನಕ್ಕಾಗಿ ಇವರು ಕಾನ್ಪುರದಿಂದ ಬಂದಿದ್ದರು.
‘ಸ್ನಾನ ಮಾಡುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳೀಯರು ಇವರನ್ನು ನೀರಿನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆಗೆ ತರುವಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ನಗರ) ಮಧುವನ್ ಕುಮಾರ್ ಹೇಳಿದ್ದಾರೆ.
ಘಟನೆ ಸಂಬಂಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಾಟ್ನಲ್ಲಿ ಸಾಮಾನ್ಯ ಸ್ನಾನಕ್ಕೆ ಬದಲಾಗಿ, ಇವರು ರಾಮಕಥಾ ಪಾರ್ಕ್ ಸಮೀಪದ ಸ್ಮಶಾನ ಭೂಮಿಯ ಪಕ್ಕ ಇರುವ ನದಿ ದಂಡೆಯಲ್ಲಿ ಸ್ಥಾನ ಮಾಡಲು ಇಳಿದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.