ಹೈದರಾಬಾದ್:ತೆಲಂಗಾಣದ ವಿಧಾನಸಭೆಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ನಾಯಕ ಕೆ.ಚಂದ್ರಶೇಖರ್ ರಾವ್ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪಂಚ ರಾಜ್ಯಗಳ ಚುನಾವಣೆ ಪೈಕಿ ತೆಲಂಗಾಣದಲ್ಲಿ ಬಿಜೆಪಿ, ಕಾಂಗ್ರೆಸ್ಅನ್ನು ಹಿಂದಿಕ್ಕಿ ಟಿಆರ್ಎಸ್ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.
119 ಸ್ಥಾನಗಳ ಸಂಖ್ಯಾಬಲದ ವಿಧಾನಸಭೆಗೆ ಬಹುಮತಕ್ಕೆ 60 ಸ್ಥಾನ ಬೇಕು. ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ಎಸ್ ಯಾರೂ ನಿರೀಕ್ಷಿಸದ ರೀತಿಯಲ್ಲಿ 88 ಸ್ಥಾನಗಳಲ್ಲಿ ಗೆದ್ದು ಪ್ರಚಂಡ ಬಹುಮತ ಗಳಿಸಿದೆ.
ನಾಲ್ಕನೇ ಮೂರರಷ್ಟು ಬಹುಮತದೊಂದಿಗೆ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಲು ಟಿಆರ್ಎಸ್ ಸಜ್ಜಾಗಿದೆ. ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಕಾಂಗ್ರೆಸ್ ನೇತೃತ್ವದ ‘ಪ್ರಜಾ ಮಹಾಕೂಟ’ ಇನ್ನಿಲ್ಲದಂತೆ ನೆಲಕ್ಕಚ್ಚಿದೆ.
ಎಲ್ಲೆಡೆ ಸಂಭ್ರಮ ತೆಲಂಗಾಣದಲ್ಲಿ ಟಿಆರ್ಎಸ್ ಅಭೂತಪೂರ್ವ ಜಯಗಳಿಸಿದ ಬೆನ್ನಲ್ಲೇ ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ವಿವಿಧ ವಾಧ್ಯಗಳ ತಾಳಕ್ಕೆ ಹೆಜ್ಜೆ ಹಾಕುತ್ತಾ, ಬಣ್ಣ ಎರಚಿ, ನೃತ್ಯ ಮಾಡಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.