ಜೈಪುರ: ರಾಜಸ್ಥಾನದಲ್ಲಿ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಬಿಜೆಪಿ ಇನ್ನಷ್ಟೇ ಆರಂಭಿಸಬೇಕಿದೆ. ಈ ನಡುವೆ, ವಸುಂಧರಾ ರಾಜೇ ಅವರು ಮುಖ್ಯಮಂತ್ರಿ ಆಗಲಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.
ಮುಖ್ಯಮಂತ್ರಿ ನೇಮಕ ವಿಚಾರದಲ್ಲಿ ಬಿಜೆಪಿ ನಾಯಕರು ಅವಸರ ತೋರುತ್ತಿಲ್ಲ. ಪಕ್ಷದ ಒಂದು ವರ್ಗವು, ಮುಖ್ಯಮಂತ್ರಿಯಾಗಿ ರಾಜೇ ಅವರು ಸೂಕ್ತ ಅಭ್ಯರ್ಥಿಯಾಗುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜೇ ಅವರ ಬೆಂಬಲಿಗರ ಪೈಕಿ ಎರಡು ಡಜನ್ ಮಂದಿ ಗೆಲುವು ಕಂಡಿದ್ದಾರಾದರೂ, ರಾಜೇ ಅವರ ಕೆಲವು ಬೆಂಬಲಿಗರು ಕೆಲವೆಡೆ ಪಕ್ಷದ ಅಭ್ಯರ್ಥಿಗಳು ಸೋಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ವರದಿ ಪಕ್ಷದ ವರಿಷ್ಠರನ್ನು ತಲುಪಿದೆ ಎನ್ನಲಾಗಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಗಜೇಂದ್ರ ಶೆಖಾವತ್ ಮತ್ತು ಅರ್ಜುನ್ ರಾಂ ಮೇಘವಾಲ್, ಶಾಸಕಿ ದಿಯಾ ಕುಮಾರಿ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿದೆ.