ಹೈದರಾಬಾದ್: ತಮ್ಮ ನಿವಾಸದ ಹೊರಗೆ ಪೊಲೀಸರ ಜತೆ ವಾಗ್ವಾದ ನಡೆಸಿ, ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರನ್ನು ಸೋಮವಾರ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
#WATCH | YSRTP Chief YS Sharmila manhandles police personnel as she is being detained to prevent her from visiting SIT office over the TSPSC question paper leak case, in Hyderabad pic.twitter.com/StkI7AXkUJ
— ANI (@ANI) April 24, 2023
‘ಕೆಲವು ಟಿ.ವಿ ದೃಶ್ಯಗಳನ್ನು ನೋಡಿದ್ದೇವೆ. ಅದರಲ್ಲಿ ಅನುಮತಿ ಪಡೆಯದೇ ಪ್ರತಿಭಟನೆಯೊಂದರಲ್ಲಿ ಭಾಗವಹಿಸಲು ಶರ್ಮಿಳಾ ತೆರಳುತ್ತಿದ್ದಾಗ ಅವರನ್ನು ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಆಗ ಅವರ ಮೇಲೆ ಶರ್ಮಿಳಾ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ. ಅವರು ಎಸ್ಐಟಿ ಕಚೇರಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಾಗ, ಅವರು ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ. ಹಾಗಾಗಿ, ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿದ್ದರು’ ಎಂದು ಪೊಲೀಸ್ ಉಪ ಕಮಿಷನರ್ (ಪಶ್ಚಿಮ ವಲಯ) ಜೋಯಲ್ ಡೇವಿಸ್ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
‘ಅಧಿಕಾರಿಗಳು ಶರ್ಮಿಳಾ ಅವರಿಗೆ ಮಾಹಿತಿ ನೀಡಲು ಮತ್ತು ತಮ್ಮ ನಿವಾಸದಿಂದ ಹೊರ ಹೋಗದಂತೆ ತಡೆಯಲು ಅಲ್ಲಿಗೆ ತೆರಳಿದರು. ಆದರೆ, ಅವರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ದೃಶ್ಯಗಳು ವರದಿಯಾಗಿವೆ. ಈ ಸಂಬಂಧ ಅಧಿಕಾರಿಗಳಿಂದ ದೂರು ಪಡೆದ ಬಳಿಕ ಕಾನೂನುಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಹೇಳಿದ್ದಾರೆ.
‘ಟಿಎಸ್ಪಿಎಸ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ನಾನು ಎಸ್ಐಟಿ ಕಚೇರಿಗೆ ತೆರಳಲು ಯೋಚಿಸಿದ್ದೆ. ಆದರೆ, ಪೊಲೀಸರು ನನ್ನನ್ನು ಗೃಹಬಂಧನದಲ್ಲಿಟ್ಟರು’ ಎಂದು ಶರ್ಮಿಳಾ ಹೇಳಿದ್ದಾರೆ.
ಕೋಪೋದ್ರಿಕ್ತರಾಗಿದ್ದ ಶರ್ಮಿಳಾ ಅವರು ಉದ್ದೇಶಪೂರ್ವಕವಾಗಿಯೇ ಪೊಲೀಸ್ ಸಿಬ್ಬಂದಿಯೊಬ್ಬರನ್ನು ನೂಕುವ ಮತ್ತು ಮಹಿಳಾ ಕಾನ್ಸ್ಟೆಬಲ್ವೊಬ್ಬರ ಕೆನ್ನೆಗೆ ಹೊಡೆಯುವ ಹಾಗೂ ತನ್ನನ್ನು ಏಕೆ ತಡೆಯುತ್ತೀರಿ ಎಂದು ಪ್ರಶ್ನಿಸುವ ವಿಡಿಯೊಗಳು ಟಿ.ವಿ ವಾಹಿನಿಗಳಲ್ಲಿ ಬಿತ್ತರಗೊಂಡಿವೆ.
ಶರ್ಮಿಳಾ ತಮ್ಮ ಕಾರಿನಲ್ಲಿ ಕುಳಿತುಕೊಳ್ಳಲು ಮುಂದಾಗುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಯೊಬ್ಬರು ಕಾರಿನ ಬಾಗಿಲಿಗೆ ಅಡ್ಡ ನಿಲ್ಲುತ್ತಾರೆ. ಆಗ ಶರ್ಮಿಳಾ ಪೊಲೀಸರ ಜತೆಗೆ ವಾಗ್ವಾದ ನಡೆಸುವ ದೃಶ್ಯಗಳೂ ಮಾಧ್ಯಮಗಳಲ್ಲಿ ಬಿತ್ತರವಾಗಿವೆ.
ತನ್ನ ಕಾರ್ಯವನ್ನು ಸಮರ್ಥಿಸಿಕೊಂಡಿರುವ ಶರ್ಮಿಳಾ ಅವರು ತಮ್ಮ ಹೇಳಿಕೆಯಲ್ಲಿ ‘ಆತ್ಮರಕ್ಷಣೆಗಾಗಿ ಕಾರ್ಯನಿರ್ವಹಿಸುವುದು ನನ್ನ ಜವಾಬ್ದಾರಿ. ಪೊಲೀಸರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ಹೈದರಾಬಾದ್: ತೆಲುಗು ಭಾಷಿಕ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಪ್ರತಿಷ್ಠಿತ ರಾಜಕೀಯ ಕುಟುಂಬಗಳ ಮಹಿಳಾ ರಾಜಕಾರಣಿಗಳಾದ ವೈ.ಎಸ್. ಶರ್ಮಿಳಾ ಮತ್ತು ಕೆ. ಕವಿತಾ ಆಯಾ ರಾಜ್ಯಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸುವ ಪ್ರಸ್ತುತ ಬೆಳವಣಿಗೆಗಳಲ್ಲಿ ಸುದ್ದಿಯಲ್ಲಿದ್ದಾರೆ.
ಕೆ. ಕವಿತಾ ಅವರು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಪುತ್ರಿಯಾದರೆ, ವೈ.ಎಸ್. ಶರ್ಮಿಳಾ ಅವರು ಅವಿಭಿಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿ. ವೈ.ಎಸ್. ರಾಜಶೇಖರ್ ರೆಡ್ಡಿ (ವೈಎಸ್ಆರ್) ಅವರ ಪುತ್ರಿ.
ದೆಹಲಿ ಮದ್ಯ ನೀತಿ ಹಗರಣದಲ್ಲಿಸಿಬಿಐನಿಂದ ತನಿಖೆಗೊಳಾಗುವ ಮೂಲಕ ಕವಿತಾ ಸುದ್ದಿಯಲ್ಲಿದ್ದರೆ, ಶರ್ಮಿಳಾ ತಾವೇ ಕಟ್ಟಿ ಬೆಳೆಸುತ್ತಿರುವ ವೈಎಸ್ಆರ್ ತೆಲಂಗಾಣ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಪ್ರತ್ಯೇಕ ತೆಲಂಗಾಣ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕವಿತಾ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ನಿಜಾಮಾಬಾದ್ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾದರು. ಆದರೆ, 2019ರಲ್ಲಿ ಬಿಜೆಪಿ ನಾಯಕ ಅರವಿಂದ್ ಧರ್ಮಪುರಿ ವಿರುದ್ಧ ಸೋತ ಅವರು ಪ್ರಸ್ತುತ ಭಾರತ ರಾಷ್ಟ್ರ ಸಮಿತಿಪಕ್ಷದ (ಬಿಆರ್ಎಸ್) ವಿಧಾನ ಪರಿಷತ್ ಸದಸ್ಯೆಯಾಗಿದ್ದಾರೆ.
ದೆಹಲಿಯ ಅಬಕಾರಿ ಹಗರಣದಲ್ಲಿ ಆಪಾದಿತರ ಕುರಿತು ಜಾರಿ ನಿರ್ದೇಶನಾಲಯವು (ಇ.ಡಿ) ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿತಮ್ಮ ಹೆಸರು ಕೇಳಿಬಂದಾಗ ಕವಿತಾ, ತಾವು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದರು. ಈ ಬೆನ್ನಲ್ಲೆ ಸಿಬಿಐ ಭಾನುವಾರ ಸುಮಾರು ಆರು ತಾಸುಗಳ ಕಾಲ ಕವಿತಾ ಅವರ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಅಣ್ಣ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಪರ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಶರ್ಮಿಳಾ, ಅಣ್ಣನ ವಿರೋಧದ ನಡುವೆಯೇ ವೈಎಸ್ಆರ್ ತೆಲಂಗಾಣ ಪಕ್ಷವನ್ನು ಕಟ್ಟಿದವರು.
ತೆಲಂಗಾಣ ರಾಜಕೀಯದಲ್ಲಿ ವಲಯದಲ್ಲಿ ಶರ್ಮಿಳಾ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲವಾದರೂ, ಅವರ ಇತ್ತೀಚಿನ ಚಟುವಟಿಕೆಗಳ ಕಾರಣಕ್ಕಾಗಿ ಅವರು ಚರ್ಚೆಯಲ್ಲಿದ್ದಾರೆ. ತೆಲಂಗಾಣದಲ್ಲಿ ‘ಪಾದಯಾತ್ರೆ’ (ಕಾಲ್ನಡಿಗೆ ಜಾಥಾ) ಹಮ್ಮಿಕೊಂಡಿರುವ ಶರ್ಮಿಳಾ ಇದುವರೆಗೆ 3,500 ಕಿ.ಮೀ ವರೆಗೆ ಯಾತ್ರೆ ನಡೆಸಿದ್ದಾರೆ.
ಯಾತ್ರೆಯ ಸಂದರ್ಭದಲ್ಲೇ ಶರ್ಮಿಳಾ ಅವರ ಬೆಂಗಾವಲು ವಾಹನ ಹಾಗೂ ಅವರ ಪಕ್ಷದ ಕಾರ್ಯಕರ್ತರ ವಾಹನಗಳ ಮೇಲೆ ಟಿಆರ್ಎಸ್ ಬೆಂಬಲಿಗರು ದಾಳಿ ನಡೆಸಿದ್ದರು. ಇದನ್ನು ವಿರೋಧಿಸಿ ಮುಖ್ಯಮಂತ್ರಿ ಕೆಸಿಎರ್ ಮನೆ ಮುಂದೆ ಪ್ರತಿಭಟಿಸಲು ತೆರಳುತ್ತಿದ್ದ ವೇಳೆ ಶರ್ಮಿಳಾ ಅವರನ್ನು ಕಾರುಸಮೇತ ಪೊಲೀಸರು ಎಳೆದೊಯ್ದಿದ್ದರು. ಈ ಘಟನೆ ದೇಶದಾದ್ಯಂತ ಸುದ್ದಿಯಾಗಿತ್ತು. ಅಷ್ಟೇ ಅಲ್ಲ ದಕ್ಷಿಣ ಭಾರತದ ರಾಜಕೀಯ ಪಕ್ಷಗಳಿಂದ ಟೀಕೆಗೂ ಒಳಗಾಯಿತು. ಈ ಸಂದರ್ಭದಲ್ಲಿ ಕವಿತಾ ಮತ್ತು ಶರ್ಮಿಳಾ ಟ್ವಿಟ್ಟರ್ನಲ್ಲಿ ಪರಸ್ಪರ ಟೀಕೆಗಳನ್ನು ಮಾಡಿಕೊಂಡಿದ್ದರು.
ಈ ಘಟನೆಯ ಬಳಿಕ ತೆಲಂಗಾಣ ಪೊಲೀಸರು ಶರ್ಮಿಳಾ ಅವರ ‘ಪಾದಯಾತ್ರೆ’ಗೆ ಅನುಮತಿ ನಿರಾಕರಿಸಿದರು. ವಾರಂಗಲ್ ಜಿಲ್ಲೆಯಲ್ಲಿ ಇದಕ್ಕೆ ತಡೆಯೊಡ್ಡಲಾಯಿತು. ಈ ಕ್ರಮವನ್ನು ಪ್ರಶ್ನಿಸಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಶರ್ಮಿಳಾ ಅವರ ಪ್ರತಿಭಟನೆಯನ್ನೂ ಪೊಲೀಸರು ವಿಫಲಗೊಳಿಸಿದ್ದು, ಅನಾರೋಗ್ಯಕ್ಕೀಡಾಗಿರುವ ಶರ್ಮಿಳಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಂಧ್ರದ ರಾಜಕೀಯ ನಂಟಿದ್ದರೂ ಒಂದು ಕಾಲದಲ್ಲಿ ಆಂಧ್ರದ ಭಾಗವಾಗಿದ್ದ ತೆಲಂಗಾಣದ ನೆಲ ತಮಗೆ ಪ್ರಸ್ತುತ ಎಂಬುದನ್ನು ತೋರಿಸಲು ಶರ್ಮಿಳಾ ಪದೇ ಪದೇ ಯತ್ನಿಸುತ್ತಿದ್ದಾರೆ. ‘ನಾನು ಹೈದರಾಬಾದ್ನಲ್ಲಿ ಓದಿರುವೆ. ನನ್ನ ಮಗ ಮತ್ತು ಮಗಳಿಗೆ ಇಲ್ಲಿಯೇ ಜನ್ಮ ನೀಡಿರುವೆ’ ಎಂದು ಹೇಳುವ ಮೂಲಕ ತೆಲಂಗಾಣದ ನಂಟನ್ನು ಸಾಬೀತುಪಡಿಸಲು ಯತ್ನಿಸುತ್ತಿದ್ದಾರೆ. ಒಟ್ಟಾರೆ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಶರ್ಮಿಳಾ ತೆಲಂಗಾಣದ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುವ ಹವಣಿಕೆಯಲ್ಲಿದ್ದಾರೆ. ಮತ್ತೊಂದೆಡೆ ‘ದೆಹಲಿ ಅಬಕಾರಿ ಹಗರಣ’ದಲ್ಲಿ ಕ್ಲೀನ್ ಚಿಟ್ ಪಡೆದರೆ ಕವಿತಾ ಅವರು ಕಳಂಕರಹಿತ ನಾಯಕಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.