ಮುಂಬೈ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ, ನೂತನ ಸಂಸದೆ ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಕೆಲಸದಿಂದ ವಜಾಗೊಳಿಸಿದರೆ, ಅವರಿಗೆ ಉದ್ಯೋಗ ನೀಡುವುದಾಗಿ ಬಾಲಿವುಡ್ ಸಂಗೀತ ಸಂಯೋಜಕ, ಗಾಯಕ ವಿಶಾಲ್ ದದ್ಲಾನಿ ಭರವಸೆ ನೀಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿರುವ ಅವರು, ‘ಹಿಂಸಾಚಾರವನ್ನು ನಾನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ, ಆದರೆ ಕಾನ್ಸ್ಟೆಬಲ್ ಕೌರ್ ಅವರ ಸಿಟ್ಟನ್ನು ಅರ್ಥಮಾಡಿಕೊಳ್ಳುತ್ತೇನೆ. ಸಿಐಎಸ್ಎಫ್ ಕೌರ್ ವಿರುದ್ಧ ಕ್ರಮ ಕೈಗೊಂಡರೆ, ಅವರಿಗೋಸ್ಕರ ಒಂದು ಕೆಲಸ ಕಾಯುತ್ತಿದೆ, ಅದನ್ನು ಒಪ್ಪಿಕೊಳ್ಳಬೇಕಷ್ಟೆ’ ಎಂದು ಬರೆದುಕೊಂಡಿದ್ದಾರೆ.
‘ನಿಮ್ಮ ತಾಯಿ ₹100ಕ್ಕೆ ಸಿಗ್ತಾರಾ ಎಂದು ಯಾರಾದರೂ ಕೇಳಿದ್ದರೆ ಆಗ ನೀವೇನು ಮಾಡುತ್ತಿದ್ದಿರಿ ಎಂಬ ಪ್ರಶ್ನೆಯನ್ನು ಯಾರೆಲ್ಲಾ ದುಂಗನಾ (ಕಂಗನಾ) ಅವರ ಪರವಾಗಿದ್ದಿರೋ ಅವರನ್ನು ಕೇಳಬಯಸುತ್ತೇನೆ’ ಎಂದು ಮತ್ತೊಂದು ಪೋಸ್ಟ್ನಲ್ಲಿ ದದ್ಲಾನಿ ಬರೆದುಕೊಂಡಿದ್ದಾರೆ. ಕೌರ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿದರೆ, ಅವರಿಗೆ ನನ್ನನ್ನು ಸಂಪರ್ಕಿಸಲು ತಿಳಿಸಿ, ಅವರಿಗೆ ಕೈತುಂಬ ಸಂಬಳ ಸಿಗುವ ಉದ್ಯೋಗದ ಖಾತ್ರಿಯನ್ನು ನೀಡುತ್ತೇನೆ’ ಎಂದು ಹೇಳಿದ್ದಾರೆ.