ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಪೂರ್ಣ ಪ್ರಮಾಣದ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಎಲ್ಲ ಎಂಟು ಹಂತಗಳ ಮತ್ತು ಅಸ್ಸಾಂನಲ್ಲಿ ಮೂರು ಹಂತಗಳಚುನಾವಣೆಗಾಗಿ ಪ್ರಚಾರ ನಡೆಸುವುದಾಗಿ ಗೌತಮ್ ಗಂಭೀರ್ಖಚಿತಪಡಿಸಿದ್ದಾರೆ.
ದೆಹಲಿಯ ಹೊರತಾದ ರಾಜ್ಯದಲ್ಲಿ ಗಂಭೀರ್, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ.
ಕಳೆದ ವರ್ಷ ಹರಿಯಾಣದಲ್ಲಿ ಮಾಜಿ ಹಾಕಿ ಆಟಗಾರ ಸಂದೀಪ್ ಸಿಂಗ್ ಅವರ ಪರ ಪ್ರಚಾರ ನಡೆಸಿದ್ದರು.
ಬಿಜೆಪಿ ಹೊರಗಿನವರ ಪಕ್ಷವಾಗಿದ್ದು, ರಾಜ್ಯದಲ್ಲಿ ಯಾವುದೇ ಸ್ಥಾನವಿಲ್ಲ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆಯಿಂದ ಬೇಸರಗೊಂಡಿದ್ದೇನೆ ಎಂದು ಗಂಭೀರ್ ಹೇಳಿದರು.
ನಾನು ಹೊರಗಿನವನು ಅಥವಾ ಬಂಗಾಳದಲ್ಲಿ ಹುಟ್ಟಿ ಬೆಳೆದಿಲ್ಲ ಎಂಬ ಭಾವನೆ ಉಂಟಾಗಿಲ್ಲ. ನಾನು ಯಾವತ್ತೂ ಬಂಗಾಳ ಕುಂಟುಬದ ಭಾಗವಾಗಿದ್ದೇನೆ ಎಂದು ಅಂದುಕೊಂಡಿದ್ದೇನೆ. ಪ್ರತಿ ಬಾರಿಯೂ ಇಲ್ಲಿಗೆ ಭೇಟಿ ನೀಡಿದಾಗ ಇಲ್ಲಿನ ಜನರು ಪ್ರೀತಿ ತೋರಿ ಆಶೀರ್ವದಿಸಿದ್ದಾರೆ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದಲ್ಲಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗಂಭೀರ್, ಬಾಂಬ್ ಹಾಗೂ ಬುಲೆಟ್ಗಳಿಂದ ರಾಜ್ಯದ ಭವಿಷ್ಯವನ್ನು ನಿರ್ಧರಿಸಬಾರದು ಎಂದು ಹೇಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗಂಭೀರ್ ನಾಯಕತ್ವದಡಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು.