ನವದೆಹಲಿ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಇದುವರೆಗೂ ಪ್ರವಾಹದಿಂದ ರಕ್ಷಿಸಲಾದ ನಾಗರಿಕರ ಸಂಖ್ಯೆ ಮತ್ತು ಇನ್ನಿತರ ಮಾಹಿತಿಯನ್ನು ನೀಡುವಂತೆ ಕೇಂದ್ರ ಸರ್ಕಾರ ಕೋರಿದೆ. ಸಂತ್ರಸ್ತರ ಮಾಹಿತಿಯನ್ನು ಆದಷ್ಟು ಶೀಘ್ರ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವನ್ನು ಕೋರಿದ್ದಾರೆ.
‘ದುರಂತದಲ್ಲಿ ಬದುಕುಳಿದವರ ಪಟ್ಟಿ ಆತಂಕದಲ್ಲಿರುವ ಕುಟುಂಬ ಸದಸ್ಯರ ನಗುವಿಗೆ ಕಾರಣವಾಗಬಹುದು’ ಎಂದು ಅವರು ಹೇಳಿದ್ದಾರೆ.
ಪ್ರವಾಹದ ಬಗ್ಗೆ ಪೂರ್ವ ಮಾಹಿತಿ ಇರಲಿಲ್ಲ. ಇದೊಂದು ಅನಿರೀಕ್ಷಿತ ಪ್ರಕೃತಿ ವಿಕೋಪ. ಜನರನ್ನು ರಕ್ಷಿಸಲು ಆಡಳಿತ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಗೋಸ್ವಾಮಿ ತಿಳಿಸಿದ್ದಾರೆ. ಇಡೀ ಕಾಶ್ಮೀರ ಕಣಿವೆಗೆ ವಿದ್ಯುತ್ ಪೂರೈಸುವ ಮೀರ್ಬಜಾರ್ ವಿದ್ಯುತ್ ವಿತರಣಾ ಕೇಂದ್ರಕ್ಕೆ ಚಾಲನೆ ನೀಡುವ ಯತ್ನ ನಡೆದಿದೆ.
ಒಮ್ಮೆ ವಿದ್ಯುತ್ ಸಂಪರ್ಕ ಸರಿಹೋದಲ್ಲಿ ಜನರು ಮೊಬೈಲ್ ದೂರವಾಣಿ ಚಾರ್ಜ್ ಮಾಡಿಕೊಳ್ಳುತ್ತಾರೆ. ಆಗ, ಜಲಾವೃತಗೊಂಡವರು ಸಂಬಂಧಿಗಳನ್ನು, ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದೂ ಅವರು ಹೇಳಿದ್ದಾರೆ.