ಮುಂಬೈ (ಪಿಟಿಐ, ಐಎಎನ್ಎಸ್): ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರು ಮುಂಬೈ ಭೂಗತ ಪಾತಕಿಗಳಿಂದ ತಮಗೆ ಜೀವ ಭಯ ಇರುವುದಾಗಿ ಗುಪ್ತಚರ ಮೂಲಗಳು ತಿಳಿಸಿದ ಕಾರಣಕ್ಕಾಗಿ ಶುಕ್ರವಾರ ಆರಂಭವಾದ ಜೈಪುರ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡಿಲ್ಲವೆಂದು ತಿಳಿಸಿರಬಹುದು. ಆದರೆ ಮಹಾರಾಷ್ಟ್ರ ಪೊಲೀಸರು ಶನಿವಾರ ಇಲ್ಲಿ ಪ್ರತಿಕ್ರಿಯಿಸಿ, ಅಂತಹ ಯಾವುದೇ ಮಾಹಿತಿಯನ್ನು ತಾವು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಶ್ದಿಯವರನ್ನು ಹತ್ಯೆ ಮಾಡಲು ಮುಂಬೈ ಭೂಗತ ಪಾತಕಿಗಳಿಗೆ ಸುಪಾರಿ ನೀಡಲಾಗಿದೆ ಎಂಬ ಮಾಹಿತಿ ಸ್ವತಃ ನಮಗೇ ಇಲ್ಲದಿರುವಾಗ, ಬೇರೊಬ್ಬರೊಂದಿಗೆ ಅಂತಹ ಮಾಹಿತಿಯನ್ನು ಹಂಚಿಕೊಳ್ಳುವುದು ಹೇಗೆ ಸಾಧ್ಯ ಎಂದು ಮಹಾರಾಷ್ಟ್ರ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸುಬ್ರಮಣಿಯಂ ಅವರು ತಮ್ಮನ್ನು ಪ್ರಶ್ನಿಸಿದ ಸುದ್ದಿಗಾರರಿಗೆ ಮರು ಪ್ರಶ್ನೆ ಹಾಕಿದರು.