ನವದೆಹಲಿ (ಪಿಟಿಐ): ವಿಮಾನ ನಿಲ್ದಾಣಗಳಲ್ಲಿನ ಸಾಮಾನ್ಯ ಭದ್ರತಾ ತಪಾಸಣೆಯಿಂದ ತಮಗೆ ಮತ್ತು ತಮ್ಮ ಕುಟುಂಬಕ್ಕೆ ನೀಡಿದ ವಿನಾಯಿತಿಯನ್ನು ಹಿಂತೆಗೆದುಕೊಳ್ಳುವಂತೆ ಪ್ರಿಯಾಂಕಾ ವಾಧ್ರಾ ಶುಕ್ರವಾರ ಎಸ್ಪಿಜಿಗೆ ಮನವಿ ಮಾಡಿದ್ದಾರೆ.
ತಮ್ಮ ಪತಿ ರಾಬರ್ಟ್ ವಾಧ್ರಾ ಅವರಿಗೆ ನೀಡಿರುವ ವಿಶೇಷ ಭದ್ರತಾ ಸೌಲಭ್ಯಗಳನ್ನು ರದ್ದುಪಡಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಬಂದ ವರದಿಗಳ ಹಿನ್ನೆಲೆಯಲ್ಲಿ ಎಸ್ಪಿಜಿ ಮುಖ್ಯಸ್ಥ ದುರ್ಗಾ ಪ್ರಸಾದ್ ಅವರಿಗೆ ಪತ್ರ ಬರೆದು ಪ್ರಿಯಾಂಕಾ ಈ ಕೋರಿಕೆ ಸಲ್ಲಿಸಿದ್ದಾರೆ.
ಹಿಂದಿನ ಎಸ್ಪಿಜಿ ಮುಖ್ಯಸ್ಥರು ಮತ್ತು ದೆಹಲಿ ಪೊಲೀಸರ ಸೂಚನೆ ಮೇರೆಗೆ ಈ ವಿಶೇಷ ಭದ್ರತಾ ಸೌಲಭ್ಯದಲ್ಲಿ ವಾಧ್ರಾ ಅವರ ಹೆಸರನ್ನು ಸೇರಿಸಲಾಗಿದೆಯೇ ಹೊರತು ತಮ್ಮ ಕುಟುಂಬದ ಮನವಿಯಂತೆ ಅಲ್ಲ. ಆದಷ್ಟು ಬೇಗ ಈ ಸೌಲಭ್ಯ ವಾಪಸ್ ಪಡೆದರೆ ಅದನ್ನು ಪ್ರಶಂಸಿಸುವುದಾಗಿ ಅವರು ಹೇಳಿದ್ದಾರೆ.