ಶ್ರೀನಗರ(ಐಎಎನ್ ಎಸ್): ಜಮ್ಮು ಮತ್ತು ಕಾಶ್ಮೀರದ ಲೇಹ್-ಮನಿಲಾ ರಸ್ತೆ ಬಂದ್ ಆಗಿದ್ದರಿಂದ ರಸ್ತೆಯಲ್ಲಿ ಇಡೀರಾತ್ರಿ ನಿಂತುಕೊಂಡೇ ಕಾಲ ಕಳೆದ 130 ಮಂದಿ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಮಳೆಯಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿ ಲೇಹ್ -ಮನಿಲಾ ರಸ್ತೆ ಬಂದ್ ಆಗಿತ್ತು. ಇದರಿಂದಾಗಿ, ಮಾರ್ಗಮಧ್ಯೆ ಸಿಲುಕಿಕೊಂಡಿದ್ದ 130 ಪ್ರವಾಸಿಗರನ್ನು ಜಿಲ್ಲಾಡಳಿತ ಹಾಗೂ ಪೊಲೀಸರು ರಕ್ಷಿಸಿದ್ದಾರೆ.
ಬುಧವಾರ ಇಡೀ ರಾತ್ರಿ ರಸ್ತೆಯಲ್ಲೇ ಕಳೆದು, 15 ಕಿ.ಮೀ. ನಡೆದು ಸಮೀಪದ ಬಸ್ ನಿಲ್ದಾಣ ತಲುಪಿದ ಪ್ರವಾಸಿಗರಿಗೆ ಜಿಲ್ಲಾಡಳಿತ ಪೊಲೀಸ್ ಭದ್ರತೆಯಲ್ಲಿ ಬಸ್ ವ್ಯವಸ್ಥೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ.