ನವದೆಹಲಿ (ಪಿಟಿಐ): ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಅವಿಶ್ವಾಸ ಗೊತ್ತುವಳಿ ನೋಟಿಸ್ ಸಲ್ಲಿಸಿರುವ ಸೀಮಾಂಧ್ರದ 6 ಸಂಸದರಿಗೆ ಕಾಂಗ್ರೆಸ್ ವಿಪ್ ಜಾರಿಗೊಳಿಸುವ ಸಾಧ್ಯತೆ ಇದೆ.
‘ಈ ಸಂಸದರು ಶಿಸ್ತುಬದ್ಧ ಪಕ್ಷದ ಸದಸ್ಯರು. ಅವರು ಅಶಿಸ್ತು ತೋರಿದರೆ ಪಕ್ಷ ಅದನ್ನು ನೋಡಿಕೊಳ್ಳುತ್ತದೆ’ ಎಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮಂಗಳವಾರ ಹೇಳಿದ್ದಾರೆ. ತಮ್ಮದೇ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ನೋಟಿಸ್ ಸಲ್ಲಿಸಿರುವ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ ಎಂಬ ಪ್ರಶ್ನೆಗೆ ಶಿಂಧೆ ಹೀಗೆ ಉತ್ತರಿಸಿದರು.
ಹಲವು ವಿಷಯಗಳಿಗೆ ಸಂಬಂಧಿಸಿ ಮಂಗಳವಾರ ಸದನದಲ್ಲಿ ಉಂಟಾದ ಗದ್ದಲದಿಂದಾಗಿ ಗೊತ್ತುವಳಿಯನ್ನು ಚರ್ಚೆಗೆ ಕೈಗೆತ್ತಿಕೊಳ್ಳಲು ಸ್ಪೀಕರ್ಗೆ ಸಾಧ್ಯವಾಗಲಿಲ್ಲ ಎಂದು ಲೋಕಸಭೆಯಲ್ಲಿ ಆಡಳಿತ ಪಕ್ಷದ ನಾಯಕರೂ ಆಗಿರುವ ಶಿಂಧೆ ಹೇಳಿದರು.