ರಾಯಚೂರು ಎಂಬ ಉರಿಬಿಸಿಲ ಊರನ್ನು ಮಲೆನಾಡನ್ನಾಗಿಸುವ ಕನಸು ಈ ಈರಣ್ಣ ಕೋಸಗಿ ಅವರದ್ದು. ರಾಯಚೂರಿನ ನೇತಾಜಿ ನಗರದಲ್ಲಿರುವ ಇವರು, ಪ್ರತಿ ದಿನ ಎರಡು ತಾಸುಗಳನ್ನು ನಗರವನ್ನು ಹಸಿರನ್ನಾಗಿಸಲು ಮೀಸಲಿಡುತ್ತಾರೆ. ತಮ್ಮ ಮನೆಯ ಹಿಂದೆಯೇ ನರ್ಸರಿ ಮಾಡಿಕೊಂಡಿರುವ ಈರಣ್ಣ, ಅದರ ಸಸಿಗಳನ್ನು ರಾಯಚೂರಿನ ವಿವಿಧೆಡೆ ನೆಟ್ಟು ಬರುತ್ತಾರೆ. ಯಾವುದೇ ಪ್ರಚಾರ, ಫಲಾಪೇಕ್ಷೆಯಿಲ್ಲದೆ 2006ರಿಂದ ಈ ಕಾಯಕದಲ್ಲಿ ನಿರತರಾಗಿರುವ ಈರಣ್ಣ, ಈವರೆಗೆ ನೆಟ್ಟಿರುವ ಸಸಿ, ಬೆಳೆಸಿರುವ ಮರಗಳ ಸಂಖ್ಯೆ 10 ಸಾವಿರಕ್ಕೂ ಹೆಚ್ಚು ! ಆರ್ಥಿಕವಾಗಿ ಬಡತನದಲ್ಲಿರುವ ಈ ಈರಣ್ಣ, ಪರಿಸರದ ವಿಷಯದಲ್ಲಿ ಮತ್ತು ಸ್ವಭಾವದಲ್ಲಿ ಹೃದಯ ಶ್ರೀಮಂತ.