ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತೂರು ವಿಜಯೋತ್ಸವದ 200ನೇ ವರ್ಷ ಅದ್ಧೂರಿ ಆಚರಣೆ: ಸಚಿವ ಸತೀಶ ಜಾರಕಿಹೊಳಿ

ಕಿತ್ತೂರು ಉತ್ಸವ-2023ಕ್ಕೆ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ
Published 23 ಅಕ್ಟೋಬರ್ 2023, 16:56 IST
Last Updated 23 ಅಕ್ಟೋಬರ್ 2023, 16:56 IST
ಅಕ್ಷರ ಗಾತ್ರ

ವೀರರಾಣಿ ಚನ್ನಮ್ಮ ವೇದಿಕೆ (ಕಿತ್ತೂರು): '202ಯ4ಕ್ಕೆ ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ ತುಂಬಲಿದೆ. ಆ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದಿಂದ ಅತ್ಯಂತ ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುವುದು' ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ಮಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಹಮ್ಮಿಕೊಂಡ ಮೂರು ದಿನಗಳ ರಾಜ್ಯಮಟ್ಟದ ಕಿತ್ತೂರು ಉತ್ಸವವನ್ನು ಸೋಮವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

'1824 ಅಕ್ಟೋಬರ್ 23ರಂದು ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಚನ್ನಮ್ಮ ಜಯಗಳಿಸಿರುವುದರ ಸವಿನೆನಪಿಗಾಗಿ ಪ್ರತಿವರ್ಷ ವಿಜಯೋತ್ಸವ ಆಚರಿಸಲಾಗುತ್ತಿದೆ. ದ್ವಿಶತಮಾನೋತ್ಸವಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುವುದು' ಎಂದರು.

'ಕಳೆದ 25 ವರ್ಷಗಳಿಂದ ಕಿತ್ತೂರು ಉತ್ಸವ ಆಚರಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಕಾಲದಲ್ಲಿ ಉತ್ಸವವನ್ನು ಆರಂಭಿಸಲಾಗಿದ್ದು, ಅಂದಿನಿಂದ ನಾಡಿನ ಕಲೆ-ಸಂಸ್ಕೃತಿಯ ವೈಭವದ ಅನಾವರಣಗೊಳಿಸಲಾಗುತ್ತಿದೆ. ನಮ್ಮ ನೆಲದ ರಕ್ಷಣೆಗಾಗಿ ಹೋರಾಟ ನಡೆಸಿದ ಚನ್ನಮ್ಮ ಸ್ವಾಭಿಮಾನದ ಸಂಕೇತ' ಎಂದರು.

ಕಿತ್ತೂರಿಗೆ ಪ್ರತಿ ವರ್ಷ ₹5 ಕೋಟಿ

'ಕಿತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ಈ ವರ್ಷ ₹5 ಕೋಟಿಯನ್ನು ಲೋಕೋಪಯೋಗಿ ಇಲಾಖೆಯಿಂದ ನೀಡಲಾಗುವುದು. ಇದೇ ರೀತಿ ಪ್ರತಿ ವರ್ಷವೂ ₹5 ಕೋಟಿ ನೀಡಲಾಗುವುದು' ಎಂದು ಸಚಿವ ಭರವಸೆ ನೀಡೀದರು.

'ಐತಿಹಾಸಿಕ ಕಿತ್ತೂರು ಕೋಟೆಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಕೋಟೆಯ ಆವರಣದ ಸೌಂದರ್ಯೀಕರಣ ಮಾಡುವುದರ ಜತೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು' ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

'ಕಿತ್ತೂರು- ನಂದಗಡ- ಸಂಗೊಳ್ಳಿ- ಅಮಟೂರು-ಬೈಲಹೊಂಗಲ ಸೇರಿ ಪ್ರವಾಸಿ ಸರ್ಕಿಟ್ ಮಾಡಲಾಗುವುದು' ಎಂದೂ ಹೇಳಿದರು.

ಅತಿಥಿಯಾಗಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, 'ಮೂರು ದಿನಗಳ ಉತ್ಸವ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಈ ಸಂದರ್ಭದಲ್ಲಿ ಐತಿಹಾಸಿಕ ಹೋರಾಟ ಹಾಗೂ ಚರಿತ್ರೆಯ ಮಹತ್ವದ ಬಗ್ಗೆ ನಡೆಯುವ ಚಿಂತನ-ಮಂಥನವನ್ನು ಜನರಿಗೆ ತಲುಪಿಸಬೇಕಿದೆ ಎಂದರು.

'ಮುಂದಿನ ವರ್ಷ ವಿಜಯೋತ್ಸವಕ್ಕೆ 200 ವರ್ಷಗಳಾಗುವುದರಿಂದ ಕಿತ್ತೂರು ಉತ್ಸವವು ರಾಷ್ಟ್ರಮಟ್ಟದ ಉತ್ಸವವನ್ನಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವವಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಬೇಕು' ಎಂದು ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡರು.

'ಬೆಳಗಾವಿ- ಧಾರವಾಡ ರಾಷ್ಟೀಯತ ಹೆದ್ದಾರಿಯನ್ನು ಕೈಗಾರಿಕೆಗಳ ಕಾರಿಡಾರ್ ಮಾಡುವ ಮೂಲಕ ಈ ಭಾಗದ ಸರ್ವತೋಮುಖ ಪ್ರಗತಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ' ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಾಬಾಸಾಹೇಬ್ ಪಾಟೀಲ, 'ಕಿತ್ತೂರು ಉತ್ಸವವನ್ನು ಮುಂದಿನ ವರ್ಷ ರಾಷ್ಟ್ತಮಟ್ಟದ ಉತ್ಸವವನ್ನಾಗಿ ಮಾಡಲು ಎಲ್ಲ ರೀತೀಯ ಸಿದ್ಧತೆ ಮಾಡಿಕೊಳ್ಳಲಾಗುವುದು' ಎಂದರು.

ಕೋಟೆಯ ಅಭಿವೃದ್ಧಿ

'ಕೆರೆಗಳ ಅಭಿವೃದ್ಧಿಯ ಜತೆಗೆ ಉತ್ತಮ ಗುಣಮಟ್ಟದ ರಸ್ತೆಗಳನ್ನು ಒದಗಿಸಲಾಗುವುದು. ಹೆಚ್ಚಿನ ಪ್ರಮಾಣದ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು' ಎಂದು ಭರವಸೆ ನೀಡಿದರು.

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, 'ಕಿತ್ತೂರು ಉತ್ಸವ ತ್ಯಾಗ-ಬಲಿದಾನ, ಕೆಚ್ಚೆದೆಯ ಹೋರಾಟ ಮತ್ತು ಸ್ವಾಭಿಮಾನದ ಉತ್ಸವವಾಗಿದೆ.

ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮತ್ತಿತರರ ಹೋರಾಟದ ಫಲವಾಗಿ ನಾವು ಇಂದು ಉತ್ಸವ ಆಚರಿಸುತ್ತಿದ್ದೇವೆ. 200 ನೇ ವರ್ಷಾಚರಣೆಯು ರಾಷ್ಟ್ರಮಟ್ಟದ ಉತ್ಸವವಾಗಬೇಕು' ಎಂದು ಆಶಯ ವ್ಯಕ್ತಪಡಿಸಿದರು.

ಆಶೀರ್ವಚನ ನೀಡಿದ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, 'ವೀರರಾಣಿ ಎಂಬ ಹೆಸರಿಗೆ ತಕ್ಕಂತೆ ಬದುಕಿದ ಏಕೈಕ‌ ಮಹಿಳೆ ಕಿತ್ತೂರು ಚನ್ನಮ್ಮ' ಎಂದು ಬಣ್ಣಿಸಿದರು.

'ಕೇಂದ್ರ ಸರ್ಕಾರವು ಮೊದಲ ಸ್ವಾತಂತ್ರ್ಯ ಹೋರಾಟ 'ಸಿಪಾಯಿ ದಂಗೆ' ಎಂಬ ಠರಾವು ಬದಲಾಯಿಸಿ ಮೊದಲ ಸ್ವಾತಂತ್ರ್ಯ ಹೋರಾಟ ಕಿತ್ತೂರು ರಾಣಿ ಚನ್ನಮ್ಮಳ ಹೋರಾಟ ಎಂದು ತಿದ್ದುಪಡಿ ಮಾಡಿ ಠರಾವು ತೆಗೆದುಕೊಳ್ಳಬೇಕು. ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮ ಹೆಸರಿಡಬೇಕು. 200 ವರ್ಷಾಚರಣೆ ಸಂದರ್ಭದಲ್ಲಿ ಈ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಬೇಕು' ಎಂದು ಸ್ವಾಮೀಜಿ ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಧರಣಿದೇವಿ ಮಾತನಾಡಿದರು.

ಚನ್ನಮ್ಮನ ವಂಶಸ್ಥರಿಗೆ ವೇದಿಕೆಯಲ್ಲಿ ಸನ್ಮಾನ

ಕಿತ್ತೂರು ಚನ್ನಮ್ಮನ ವಂಶಸ್ಥರಾದ ತೊಲಗಿಯ ಮಲ್ಲಸರ್ಜ ಚಂದ್ರಶೇಖರ್ ದೇಸಾಯಿ ಅವರನ್ನು ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದರು.

ಎಪಿಜೆ ಅಬ್ದುಲ್ ಕಲಾಂ ಅಂತರರಾಷ್ಟ್ರೀಯ ಸೇವಾ ಪ್ರಶಸ್ತಿ ಪುರಸ್ಕೃತರಾದ ನ್ಯಾಯವಾದಿ ಸರಸ್ವತಿ ಪೂಜಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ, ಸವದತ್ತಿ ಶಾಸಕರಾದ ವಿಶ್ವಾಸ ವೈದ್ಯ, ಬೆಳಗಾವಿ ಉತ್ತರ ಶಾಸಕರಾದ ಆಸೀಫ್(ರಾಜು) ಸೇಠ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಮಾಜಿ ಶಾಸಕ ಶ್ಯಾಮ್ ಘಾಟಗೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ ಹಾಗೂ ಶೃತಿ ಜಾಧವ ನಿರೂಪಿಸಿದರು. ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ವಂದಿಸಿದರು.

ಸಾವಿರಾರು ಜನರು ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ವೈಭವದ ರಸದೌತಣ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT