ಲಿಂಗಾಯತ ಕೋಟಾದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ ಶೆಟ್ಟರ್ ಅವರನ್ನು ಹಿಂದಿಕ್ಕಿ ವಿ.ಸೋಮಣ್ಣ ಅವಕಾಶ ಪಡೆದಿದ್ದಾರೆ. ಶೋಭಾ ಕರಂದ್ಲಾಜೆ ಅವರು ಹಿಂದಿನ ಸರ್ಕಾರದಲ್ಲಿ ಕೃಷಿ ಖಾತೆ ರಾಜ್ಯ ಸಚಿವರಾಗಿದ್ದರು. ಒಕ್ಕಲಿಗ ಸಮುದಾಯದಿಂದ ಕುಮಾರಸ್ವಾಮಿ ಅವರು ಸಚಿವರಾಗುತ್ತಿರುವುದರಿಂದ ಶೋಭಾ ಮತ್ತೆ ಸಚಿವರಾಗುವುದು ಅನುಮಾನ ಎಂಬ ಸುದ್ದಿಗಳು ಹರಡಿದ್ದವು. ಒಕ್ಕಲಿಗರ ಪ್ರಾಬಲ್ಯ ಇರುವ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿಕೂಟವು ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ, ಒಕ್ಕಲಿಗ ಸಮುದಾಯದ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.