ಮಸ್ಕಿ (ರಾಯಚೂರು ಜಿಲ್ಲೆ): ಪಟ್ಟಣದಲ್ಲಿ ಅಶೋಕನ ಶಿಲಾಶಾಸನ ಪತ್ತೆಯಾಗಿ 100 ವರ್ಷ ಪೂರ್ಣಗೊಂಡಿದ್ದು, ಅದರ ವೀಕ್ಷೆಣೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವಕರು, ವಿದ್ಯಾರ್ಥಿಗಳು ಪತ್ರ ಚಳವಳಿ ಆರಂಭಿಸಿದ್ದಾರೆ.
ನಿರುಪಾದಿ ಎಂ.ಬಿ., ಶಶಿ ಹಿರೇಮಠ ನೇತೃತ್ವದ ತಂಡದವರು ತಾಲ್ಲೂಕಿನ ಶಾಲಾ–ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಶಾಸನದ ಮಹತ್ವ ತಿಳಿಸಿಕೊಡುತ್ತಿದ್ದಾರೆ. ಅಲ್ಲದೆ ಶಾಸನ ವೀಕ್ಷಣೆಗೆ ಬರಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳಿಂದ ಮೋದಿ ಅವರಿಗೆ ಪತ್ರ ಬರೆಸುತ್ತಿದ್ದಾರೆ.
‘ಈಗಾಗಲೇ ಐದು ಸಾವಿರ ಪತ್ರಗಳನ್ನು ಪ್ರಧಾನಿ ಕಚೇರಿಗೆ ರವಾನಿಸಿದ್ದೇವೆ. ಇನ್ನೂ ಮೂರು ಸಾವಿರಕ್ಕೂ ಹೆಚ್ಚು ಪತ್ರಗಳನ್ನು ವಿದ್ಯಾರ್ಥಿಗಳಿಂದ ಬರೆಸಿ ಕಳಿಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.
‘ಪ್ರಧಾನಿಗೆ ಹಮ್ಮಿಕೊಂಡಿರುವ ಪತ್ರ ಚಳವಳಿಗೆ ವಿದ್ಯಾರ್ಥಿ ಹಾಗೂ ಯುವ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಸ್ಕಿ ಶಾಸನವನ್ನು ಪ್ರಧಾನಿ ಗಮನಕ್ಕೆ ತಂದು ಅದನ್ನು ಅಭಿವೃದ್ಧಿ ಪಡಿಸಬೇಕು ಎಂಬ ಉದ್ದೇಶ ನಮ್ಮದಾಗಿದೆ’ ಎಂದು ಅವರು ತಿಳಿಸಿದ್ದಾರೆ.