ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರು ರಾಯರ 423ನೇ ವರ್ಧಂತಿ ಉತ್ಸವವು ಭಕ್ತಿ, ಭಾವದೊಂದಿಗೆ ಗುರುವಾರ ಸಂಭ್ರಮದಿಂದ ನೆರವೇರಿತು.
ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಪುಷ್ಪ ಅಲಂಕಾರ ಮಾಡಲಾಗಿತ್ತು. ತಿರುಪತಿ ತಿರುಮಲ ದೇವಸ್ಥಾನದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ರಾಯರಿಗೆ ಸಮರ್ಪಿಸಿದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ರಾಯರಿಗೆ ಅಕ್ಷಯಪಾತ್ರೆ ಸಮರ್ಪಿಸಲಾಯಿತು.
ಚೆನ್ನೈನ ನಾದಹಾರ ಸೇವಾ ಟ್ರಸ್ಟ್ನಿಂದ 14ನೇ ವರ್ಷದ ನಾದಹಾರ ಸಮರ್ಪಣೆ ಕಾರ್ಯಕ್ರಮ ವಿಶೇಷವಾಗಿತು. ದೇವಸ್ಥಾನದ ಪ್ರಕಾರದಲ್ಲಿ 450 ಗಾಯಕರು ವಿವಿಧ ವಾದ್ಯಗಳನ್ನು ನುಡಿಸುವ ಮೂಲಕ ಸಾಮೂಹಿಕವಾಗಿ ಕೀರ್ತನೆಗಳನ್ನು ಹಾಡಿದರು.
ಉತ್ಸವದಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕ ಶೇಷಾದ್ರಿ ಆಚಾರ್ಯರು, ರಾಜ ಎಸ್. ಗಿರಿಜಾಚಾರ್ಯರು, ದೇಶದ ಮೂಲೆ, ಮೂಲೆಗಳಿಂದ ವಿದ್ವಾಂಸರು ಭಕ್ತಾದಿಗಳು ಭಾಗವಹಿಸಿದ್ದರು.