ಬೆಂಗಳೂರು: ಯಶವಂತಪುರ ವೃತ್ತದಲ್ಲಿ ಗುರುವಾರ ಬೆಳಿಗ್ಗೆ ಶಾಲಾ ವಾಹನವೊಂದು ಗುದ್ದಿದ್ದರಿಂದಾಗಿ ಪಾದಚಾರಿ ಚಿಕ್ಕೋಡಿಯಪ್ಪ (78) ಎಂಬುವರು ಮೃತಪಟ್ಟಿದ್ದಾರೆ.
‘ಸ್ಥಳೀಯ ನಿವಾಸಿ ಆಗಿದ್ದ ಚಿಕ್ಕೋಡಿಯಪ್ಪ ಮೊಮ್ಮಗನ ಮದುವೆ ಆಮಂತ್ರಣವನ್ನು ಸಂಬಂಧಿಕರಿಗೆ ಕೊಡಲೆಂದು ನೆಲಮಂಗಲಕ್ಕೆ ಹೊರಟಿದ್ದರು. ಯಶವಂತಪುರ ಬಸ್ ನಿಲ್ದಾಣಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
‘ಚಾಲಕ ರಘು ಎಂಬಾತಶಾಲಾ ವಾಹನ ಚಲಾಯಿಸಿಕೊಂಡು ಬೆಳಿಗ್ಗೆ 7.15ರ ಸುಮಾರಿಗೆ ಯಶವಂತಪುರ ವೃತ್ತಕ್ಕೆ ಬಂದಿದ್ದ. ತಿರುವು ಪಡೆಯುವ ವೇಳೆಯಲ್ಲಿ ನಿರ್ಲಕ್ಷ್ಯದಿಂದ ವಾಹನ ಓಡಿಸಿ ಚಿಕ್ಕೋಡಿಯಪ್ಪ ಅವರಿಗೆ ಗುದ್ದಿಸಿದ್ದ.’
‘ನಿರ್ಲಕ್ಷ್ಯದ ಚಾಲನೆ ಆರೋಪದಡಿ ಚಾಲಕ ರಘುನನ್ನು ಬಂಧಿಸಲಾಗಿದೆ. ಶಾಲಾ ಬಸ್ ಜಪ್ತಿ ಮಾಡಲಾಗಿದೆ’ ಎಂದು ಅವರು ತಿಳಿಸಿದರು.