ಬೆಂಗಳೂರು: ಶುಕ್ರವಾರ ಮುಕ್ತಾಯವಾಗಬೇಕಿದ್ದ ವಿಧಾನಸಭೆಯ ಬಜೆಟ್ ಅಧಿವೇಶನವನ್ನು ಸೋಮವಾರದವರೆಗೆ ವಿಸ್ತರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಶುಕ್ರವಾರ ಉತ್ತರಿಸಬೇಕಿತ್ತು. ನಂತರ ಬಜೆಟ್ ಗೆ ಸದನದ ಲೇಖಾನುದಾನ ಪಡೆಯಬೇಕಿತ್ತು. ಬಳಿಕ ಅಧಿವೇಶನ ಮುಕ್ತಾಯವಾಗುತ್ತಿತ್ತು. ಮುಖ್ಯಮಂತ್ರಿಯವರು ಶುಕ್ರವಾರ ಉತ್ತರ ನೀಡಿಲ್ಲ.
ಸ್ಪೀಕರ್ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ವಿಧಾನಸಭಾ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನವನ್ನು ಒಂದು ದಿನ ವಿಸ್ತರಿಸುವ ನಿರ್ಣಯ ಕೈಗೊಳ್ಳಲಾಯಿತು. ಅದನ್ನು ಸ್ಪೀಕರ್ ಸದನದಲ್ಲಿ ಪ್ರಕಟಿಸಿದರು.