ಬೆಂಗಳೂರು: ಪಿಯು ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರಗಳಲ್ಲಿನ ತಪ್ಪುಗಳಿಂದಾಗಿ ಕೊನೆಗಳಿಗೆಯಲ್ಲಿ ಅನುಭವಿಸುವ ತೊಂದರೆಯನ್ನು ನಿವಾರಿಸಲು ಮುಂದಾಗಿರುವ ಇಲಾಖೆಯು ಇನ್ನು ಮುಂದೆ ಪರೀಕ್ಷೆಗೆ ಮೂರು ತಿಂಗಳು ಇರುವಾಗಲೇ ಎಲ್ಲಾ ಕಾಲೇಜುಗಳಿಗೆ ‘ಕರಡು ಪ್ರವೇಶ ಪತ್ರ’ ಕಳುಹಿಸಿಕೊಡಲು ನಿರ್ಧರಿಸಿದೆ.
‘2020ರ ಮಾರ್ಚ್–ಏಪ್ರಿಲ್ನಲ್ಲಿ ನಡೆಯಲಿರುವ ಪರೀಕ್ಷೆಗೆ ಅನ್ವಯವಾಗುವಂತೆ ಇದು ಜಾರಿಯಾಗುವ ನಿರೀಕ್ಷೆ ಇದೆ’ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜಾರಿಯ ಬಗ್ಗೆ ನಿರ್ದೇಶಕಿ ಎಂ.ಕನಗವಲ್ಲಿ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.
‘ಈ ತಿಂಗಳ ಅಂತ್ಯಕ್ಕೆ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಕರಡು ಪ್ರವೇಶ ಪತ್ರ ಕಳುಹಿಸಿಕೊಡಲಾಗುವುದು. ವಿದ್ಯಾರ್ಥಿಗಳು ಇವುಗಳನ್ನು ಡೌನ್ಲೋಡ್ ಮಾಡಿಕೊಂಡು ಏನಾದರೂ ತಪ್ಪುಗಳಿದ್ದರೆ ಸರಿಪಡಿಸಲು ಕೋರಿ 15–20 ದಿನಗಳಲ್ಲಿ ವಾಪಸ್ಮಂಡಳಿಗೆ ಕಳುಹಿಸಬಹುದಾಗಿದೆ’ ಎಂದು ಅಧಿಕಾರಿ ವಿವರಿಸಿದ್ದಾರೆ.
‘ಕರಡು ಪ್ರವೇಶ ಪತ್ರವು ವಿದ್ಯಾರ್ಥಿಯ ಹೆಸರು, ಕಾಲೇಜು, ವಿಷಯ ಹಾಗೂ ವಿದ್ಯಾರ್ಥಿಯ ಫೋಟೊ ಅನ್ನು ಮಾತ್ರವೇ ಒಳಗೊಂಡಿರುತ್ತದೆ. ಪರೀಕ್ಷಾ ಕೇಂದ್ರ ಹಾಗೂ ಇತರೆ ವಿವರಗಳು ಅದರಲ್ಲಿ ಅಡಕವಾಗಿರುವುದಿಲ್ಲ’ ಎಂದು ಹೇಳಿದ್ದಾರೆ. ಇದುವರೆಗೆ ತಿಂಗಳ ಮೊದಲು ಪ್ರವೇಶ ಪತ್ರಗಳನ್ನು ರವಾನಿಸಲಾಗುತ್ತಿತ್ತು.