ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟಕ ಸಾಗಿಸಿದ್ದ ಕಾರು ಗುರುತಿಸಿದ ಸಲೀಂ

Last Updated 22 ಅಕ್ಟೋಬರ್ 2018, 19:13 IST
ಅಕ್ಷರ ಗಾತ್ರ

ಬೆಂಗಳೂರು: 2008ರಲ್ಲಿ ನಗರದ ವಿವಿಧೆಡೆ ಬಾಂಬ್ ಸ್ಫೋಟಿಸುವುದಕ್ಕಾಗಿ ಸ್ಫೋಟಕವನ್ನು ಸಾಗಿಸಲು ಬಳಸಿದ್ದ ಕಾರನ್ನು ಆರೋಪಿ ಸಲೀಂ ಗುರುತು ಹಿಡಿದಿದ್ದಾನೆ.

ಪ್ರಕರಣ ಸಂಬಂಧ ಇತ್ತೀಚೆಗೆ ಬಂಧಿಸಲಾಗಿದ್ದ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯ ಶಂಕಿತ ಉಗ್ರ ಮೊಹಮದ್ ಸಲೀಂ ಅಲಿಯಾಸ್ ರೈಸಲ್‌ನನ್ನು ಕೇರಳಕ್ಕೆ ಕರೆದೊಯ್ದಿದ್ದ ಸಿಸಿಬಿ ಪೊಲೀಸರು, ಸೋಮವಾರ ನಗರಕ್ಕೆ ವಾಪಸ್‌ ಕರೆತಂದಿದ್ದಾರೆ.

‘ಪ್ರಕರಣದ ಬಳಿಕ ಕೇರಳದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ, ಹಲವೆಡೆ ಸುತ್ತಾಡಿದ್ದ. ಸ್ಥಳೀಯ ವ್ಯಕ್ತಿಗಳ ಜೊತೆಗೂ ಸಂಪರ್ಕವನ್ನಿಟ್ಟುಕೊಂಡಿದ್ದ. ಹೀಗಾಗಿ ಆತನನ್ನೇ ಕೇರಳಕ್ಕೆ ಕರೆದೊಯ್ದು ಮಾಹಿತಿ ಪಡೆದುಕೊಂಡು ಬಂದಿದ್ದೇವೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕೇರಳದ ಅರಣ್ಯದಲ್ಲಿ ಜಪ್ತಿ ಮಾಡಲಾಗಿದ್ದ ಕಾರನ್ನು ಸ್ಥಳೀಯ ಠಾಣೆ ಎದುರೇ ನಿಲ್ಲಿಸಲಾಗಿತ್ತು. ಆರೋಪಿಯನ್ನು ಅಲ್ಲಿಗೇ ಕರೆದೊಯ್ದು ಕಾರು ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಸದ್ಯದಲ್ಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ತನಿಖಾ ಪ್ರಗತಿಯನ್ನು ನ್ಯಾಯಾಧೀಶರಿಗೆ ತಿಳಿಸಲಿದ್ದೇವೆ’ ಎಂದರು.

ಸ್ಫೋಟಕ ಇಟ್ಟಿದ್ದ: ‘ಸರಣಿ ಸ್ಫೋಟ ಪ್ರಕರಣ ಸಂಬಂಧ ಕೇರಳದ ರಾಜಕಾರಣಿ ಅಬ್ದುಲ್ ನಾಸಿರ್ ಮದನಿ ಸೇರಿದಂತೆ 27 ಮಂದಿ ವಿರುದ್ಧ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅದರಲ್ಲಿ 20ನೇ ಆರೋಪಿ ಸಲೀಂ. ಈತನ ವಿರುದ್ಧ ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಅಧಿಕಾರಿ ಹೇಳಿದರು.

‘ಬಾಂಬ್‌ ಸ್ಫೋಟಿಸಬೇಕಿದ್ದ ಸ್ಥಳಗಳನ್ನು ಮೊದಲೇ ಗುರುತಿಸಿದ್ದ ಆರೋಪಿಗಳು, ಅಲ್ಲೆಲ್ಲ ಸ್ಫೋಟಕವನ್ನಿಡುವ ಕೆಲಸವನ್ನು ಸಲೀಂಗೆ ವಹಿಸಿದ್ದರು. ಆತನೇ ಕಾರಿನಲ್ಲಿ ಸ್ಫೋಟಕ ಸಾಗಿಸಿ ನಿಗದಿತ ಸ್ಥಳದಲ್ಲಿ ಇಟ್ಟುಹೋಗಿದ್ದ. ನಂತರವೇ ಅವು ಸ್ಫೋಟಗೊಂಡಿದ್ದವು. ಆ ಬಗ್ಗೆ ಆತನೇ ಹೇಳಿಕೆ ನೀಡಿದ್ದಾನೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT