ಬೆಂಗಳೂರು: ‘ಹೊಸದಾಗಿ ಪಕ್ಷಕ್ಕೆ ಬಂದ ನಾಯಕರುಗಳಿಂದ ವಿರೋಧ ಬಂದರೂ ಲೆಕ್ಕಿಸದೆ ಪಕ್ಷದ ನಿಷ್ಠಾವಂತರಿಗೆ ಅಧಿಕಾರದಲ್ಲಿ ಅವಕಾಶಗಳನ್ನು ಕಲ್ಪಿಸಬೇಕು’ ಎಂದು ಪಕ್ಷದ ನಾಯಕರಿಗೆ ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸಲಹೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜೀವ್ ಗಾಂಧಿ ಹೇಳಿದಂತೆ ನಡೆದುಕೊಳ್ಳುತ್ತಿದ್ದರು. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಕೂಡ ಅವರನ್ನೇ ಅನುಸರಿಸುತ್ತಾರೆಂದು ನಾನು ಭಾವಿಸುತ್ತೇನೆ. ಕಾರ್ಯಕರ್ತರು ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ನಮ್ಮವರಿಗೆ ಏನಾದರೂ ಸಹಾಯ ಮಾಡಬೇಕೆನ್ನುವ ಸಂದರ್ಭದಲ್ಲಿ ಹೊಸದಾಗಿ ಪಕ್ಷಕ್ಕೆ ಬಂದ ನಾಯಕರು ಅಡ್ಡಿಪಡಿಸುತ್ತಾರೆ. ಅದನ್ನು ಮೀರಿ ನಿಷ್ಠಾವಂತ ಕಾರ್ಯಕರ್ತರಿಗೆ ರಕ್ಷಣೆ ನೀಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜೀವಂತವಾಗಿರಲು ಸಾಧ್ಯ’ ಎಂದು ಎಚ್ಚರಿಸಿದರು.
‘ಹಿಂದುಳಿದ ವರ್ಗದ ನಾಯಕರಾಗಿದ್ದ ದೇವರಾಜ ಅರಸು ಅವರು ಒಂದು ಸಮುದಾಯಕ್ಕೆ ಆದ್ಯತೆ ನೀಡುತ್ತಿರಲಿಲ್ಲ. ಅತಿ ಸಣ್ಣ ಸಮುದಾಯಗಳನ್ನೂ ಗುರುತಿಸುತ್ತಿದ್ದರು. ರಾಜಕೀಯವಾಗಿ ಪ್ರಜಾಪ್ರಭುತ್ವದಲ್ಲಿ, ಪ್ರತಿನಿತ್ಯದ ರಾಜಕಾರಣದಲ್ಲಿ ಎಲ್ಲರನ್ನೂ ಒಳಗೊಂಡು ರಾಜಕಾರಣ ಮಾಡಬೇಕು. ನಾವು ಬಲಾಢ್ಯರು, ನಮ್ಮ ಜನಸಂಖ್ಯೆ ಹೆಚ್ಚಿದೆ, ಅದಕ್ಕಾಗಿ ನಮಗೆ ಮಾತ್ರ ಅವಕಾಶವಿರಬೇಕು ಎಂದು ಪ್ರತಿಪಾದಿಸಿದರೆ, ಅದು ಹೆಚ್ಚು ದಿನ ನಡೆಯದು. ಪ್ರಾದೇಶಿಕವಾರು, ಜಾತಿವಾರು ಪ್ರಾತಿನಿಧ್ಯ ನೀಡಬೇಕು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.