ಬೆಂಗಳೂರು: ಕೊಡಗಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಬೆಟ್ಟಗಳೇ ಕುಸಿಯುತ್ತಿವೆ. ನದಿ, ಹಳ್ಳ–ಕೊಳ್ಳಗಳು ಹರಿಯುವ ದಿಕ್ಕನ್ನೆ ಬದಲಿಸಿವೆ. ಇದರಿಂದ ಜನವಾಸದ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ.
ಜಲಪ್ರವಾಹದಿಂದ ಸಂಕಷ್ಟಕ್ಕೆ ಈಡಾದ ಕೊಡವರಿಗೆ ನೆರವಾಗಲು ‘ಬೆಂಗಳೂರಿನ ಕೊಡವ ಸಮಾಜ’ ಮುಂದೆ ಬಂದಿದೆ. ಮಳೆಯಿಂದ ಮನೆ–ಮಠ ಕಳೆದುಕೊಂಡು ನಿರಾಶ್ರಿತ ಆದವರಿಗಾಗಿ ಆಹಾರ ಪದಾರ್ಥ, ಬಟ್ಟೆ, ಬ್ಲಾಂಕೇಟ್ಸ್, ಟಾರ್ಪಲಿನ್, ಟೆಂಟ್ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದೆ.
‘ಉದಾರ ಮನಸ್ಕರು ಪ್ಯಾಕ್ಡ್ ಫುಡ್, ಹಾಲು, ಬಾಟಲ್ಸ್ ನೀರು, ಡ್ರೈಫ್ರುಟ್ಸ್, ಬಟ್ಟೆಗಳನ್ನು ಕೊಡಬಹುದು’ ಎಂದು ‘ಬೆಂಗಳೂರು ಕೊಡವ ಸಮಾಜ’ದ ಕಾರ್ಯದರ್ಶಿ ಸಿ.ಕೆ.ಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಗಾಗಲೇ ಒಂದು ಲಾರಿಯಷ್ಟು ಸಾಮಗ್ರಿ ಸಂಗ್ರಹವಾಗಿದೆ. ವಾಹನ ಸಾಗುವಷ್ಟು ಪ್ರವಾಹ ತಗ್ಗಿದ ತಕ್ಷಣ, ಅವುಗಳನ್ನು ಅಗತ್ಯವಿರುವ ಜನರಿಗೆ ತಲುಪಿಸುತ್ತೇವೆ’ ಎಂದು ಮಾಹಿತಿ ನೀಡಿದರು. ಈ ಕಾರ್ಯಕ್ಕೆ ಸಮಾಜದ 50ಕ್ಕೂ ಹೆಚ್ಚು ಸದಸ್ಯರು ಕೈಜೋಡಿಸಿದ್ದಾರೆ.
ಸಾಮಗ್ರಿಗಳನ್ನು ನೀವೂ ಈವಿಳಾಸದಲ್ಲಿ ನೀಡಬಹುದು: ಕೊಡವ ಸಮಾಜ, ನಂ.7, 5ನೇ ಅಡ್ಡರಸ್ತೆ, ವಸಂತ ನಗರ, ಬೆಂಗಳೂರು.