ಬೆಂಗಳೂರು:‘ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳ ಮುಖಪುಟದಲ್ಲಿ ಬಿಜೆಪಿ ಬಗ್ಗೆ ಸುಳ್ಳು ಮತ್ತು ಅವಹೇಳನಕಾರಿ ಜಾಹಿರಾತು ನೀಡಿದೆ’ ಎಂದು ಕೆಪಿಸಿಸಿ ಮತ್ತು ಅದರ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಈ ಜಾಹಿರಾತು ನೀಡಿರುವ ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರದೆಸ್ ನಾಯಕ ರಾಹುಲ್ಗಾಂಧಿ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದೆ.
ಕಾಂಗ್ರೆಸ್ ಪಕ್ಷ ಚೊಂಬು ಹೆಸರಿನಲ್ಲಿ ಜಾಹೀರಾತು ನೀಡಿದೆ. ಇದು ಸುಳ್ಳು ಮಾಹಿತಿಗಳಿಂದ ಕೂಡಿರುವ ಮಾನಹಾನಿಕಾರ ಜಾಹಿರಾತು. ವಂಚಿಸಲಾಗಿದೆ ಮತ್ತು ಮೋಸ ಮಾಡಲಾಗಿದೆ ಎಂಬುದಕ್ಕೆ ಆಡು ಮಾತಿನಲ್ಲಿ ಈ ಪದ ಬಳಸಲಾಗುತ್ತದೆ. ವಿಧಾನಸಭಾ ಚುನಾವಣೆಯಲ್ಲೂ ಇದೇ ರೀತಿ ಸುಳ್ಳು ಮಾಹಿತಿಗಳನ್ನು ಜಾಹಿರಾತುಗಳ ಮೂಲಕ ಹರಡಿತ್ತು. ಈ ಜಾಹಿರಾತಿಗಳಿಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್ನಲ್ಲಿದೆ. ಕಾಂಗ್ರೆಸ್ ಮತ್ತೆ ತನ್ನ ಹಳೇ ಚಾಳಿ ಆರಂಭಿಸಿದೆ ಎಂದು ದೂರಿನಲ್ಲಿ ಬಿಜೆಪಿ ತಿಳಿಸಿದೆ.
ಕಾಂಗ್ರೆಸ್ ಪಕ್ಷ ಸುಳ್ಳು ಮಾಹಿತಿ ಒಳಗೊಂಡ ಜಾಹಿರಾತು ನೀಡುವುದನ್ನು ತಡೆಯಬೇಕು. ಕಾಂಗ್ರೆಸ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.