ಬೆಂಗಳೂರು:ಎನ್ಎಸ್ಯುಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಗೂಂಡಾಗಳನ್ನು ಬಂಧಿಸದಿದ್ದರೆ ರಾಜ್ಯದಾದ್ಯಂತ ಚಡ್ಡಿ ಸುಡುವ ಪ್ರತಿಭಟನೆ ನಡೆಸುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ,ದೇಶಾದ್ಯಂತ ಸೋತು ಸುಣ್ಣವಾಗಿರುವ ಕಾಂಗ್ರೆಸ್ ನಾಯಕರಿಗೆ ಮಾಡಲು ಕೆಲಸವಿಲ್ಲ. ಚಡ್ಡಿ ಸುಡುವ ಅಭಿಯಾನ ನಡೆಸಿ, ದೇಶದೆದುರು ಬೆತ್ತಲಾಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಪಕ್ಷವನ್ನು, ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದ್ದು, ಹಿಗ್ಗಾಮುಗ್ಗ ಟೀಕಿಸಿದೆ.
'ದೇಶದಾದ್ಯಂತ ಸೋತು ಸುಣ್ಣವಾಗಿರುವ ಕಾಂಗ್ರೆಸ್ ನಾಯಕರಿಗೆ ಈಗ ಉದ್ಯೋಗವಿಲ್ಲ.ಚಡ್ಡಿ ಸುಡುವ ಅಭಿಯಾನ ನಡೆಸಿ ಮತ್ತೆ ದೇಶದ ಜನರ ಮುಂದೆ ಬೆತ್ತಲಾಗಲು ಹೊರಟಿದ್ದಾರಷ್ಟೆ!' ಎಂದು ಹೇಳಿದೆ.
ಮುಂದುವರಿದು, ಚಡ್ಡಿಮಾನದ ಸಂಕೇತ.ಶ್ರಮಿಕ ವರ್ಗದ ಸಂಕೇತ.ಚಡ್ಡಿ ಸುಡುವ ಅಭಿಯಾನ ನಡೆಸಿ ನಿಮ್ಮ ಮಾನವನ್ನು ನೀವೇ ಸುಟ್ಟುಕೊಳ್ಳಲು ಹೊರಟಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ಚಾಟಿ ಬೀಸಿದೆ.
'ಚಡ್ಡಿ ಸುಡುವುದು ಸಾಂಕೇತಿಕ ಪ್ರತಿಭಟನೆ ಎಂದು ವ್ಯಾಖ್ಯಾನಿಸುವಸಿದ್ದರಾಮಯ್ಯಅವರೇ,ಜವಾಹರಲಾಲ್ ನೆಹರೂ ಅವರೂ ಚಡ್ಡಿ ತೊಟ್ಟಿದ್ದು ಗೊತ್ತೇ?ಹಾಗಾದರೆ ನಿಮ್ಮ ಪ್ರತಿಭಟನೆಯ ವ್ಯಾಪ್ತಿಯಲ್ಲಿ ನೆಹರೂ ಅವರೂ ಇದ್ದಾರಾ?' ಎಂದು ಕುಟುಕಿದೆ.
'ತುಂಡುಬಟ್ಟೆ ಇದ್ದರೆ ಸಾಕು ಮಾನ ಮುಚ್ಚೋಕೆ...!' ಎನ್ನುವುದರೊಂದಿಗೆ, 'ಅದನ್ನೇ ಸುಟ್ಟು ಏನು ಸಾಧಿಸಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ?' ಎಂದು ಪ್ರಶ್ನಿಸಿದೆ.
ಕಲಾಪದ ಸಂದರ್ಭವೊಂದರಲ್ಲಿ ಸಿದ್ದರಾಮಯ್ಯ ಅವರ ಪಂಜೆ ಜಾರಿತ್ತು. ಆಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಂಚೆ ಕಟ್ಟಿಕೊಳ್ಳುವಂತೆ ಸಿದ್ದರಾಮಯ್ಯ ಅವರನ್ನು ಎಚ್ಚರಿಸಿದ್ದರು. ಆ ಸಂದರ್ಭದ ವಿಡಿಯೊವನ್ನೂ ಹಂಚಿಕೊಂಡಿರುವ ಆಡಳಿತ ಪಕ್ಷ, 'ಪಂಚೆ ಬಿದ್ದ ನಂತರ ಮಾನ ಕಾಪಾಡಿದ್ದೇ ಚಡ್ಡಿ!ಚಡ್ಡಿ ಸುಟ್ಟ ಬಳಿಕ ಪಂಚೆ ಗಟ್ಟಿಯಾಗಿರಲಿ!' ಎಂದು ಎಚ್ಚರಿಸಿದೆ.
ಪಂಚೆ ಬಿದ್ದ ನಂತರ ಮಾನ ಕಾಪಾಡಿದ್ದೇ ಚಡ್ಡಿ!
— BJP Karnataka (@BJP4Karnataka) June 5, 2022
ಚಡ್ಡಿ ಸುಟ್ಟ ಬಳಿಕ ಪಂಚೆ ಗಟ್ಟಿಯಾಗಿರಲಿ!https://t.co/yIByceJlKR
ಪಠ್ಯಪುಸ್ತಕದಲ್ಲಿ ಆರ್ಎಸ್ಎಸ್ ನೀತಿ ಅಳವಡಿಸಲಾಗುತ್ತಿದೆ ಎಂದು ಆರೋಪಿಸಿದ್ದ ಎನ್ಎಸ್ಯುಐ ಪದಾಧಿಕಾರಿಗಳು,ತಿಪಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆ ಮುಂಭಾಗ ಪ್ರತಿಭಟನೆ ನಡೆಸಿ, ಅವರ ಮನೆಗೆ ಮುತ್ತಿಗೆ ಹಾಕಲು ಬುಧವಾರ (ಜೂ.1) ಯತ್ನಿಸಿದ್ದರು.
ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಡೆದಿತ್ತು.
ದೇಶಾದ್ಯಂತ ಸೋತು ಸುಣ್ಣವಾಗಿರುವ ಕಾಂಗ್ರೆಸ್ ನಾಯಕರಿಗೆ ಈಗ ಉದ್ಯೋಗವಿಲ್ಲ.
— BJP Karnataka (@BJP4Karnataka) June 5, 2022
ಚಡ್ಡಿ ಸುಡುವ ಅಭಿಯಾನ ನಡೆಸಿ ಮತ್ತೆ ದೇಶದ ಜನರ ಮುಂದೆ ಬೆತ್ತಲಾಗಲು ಹೊರಟಿದ್ದಾರಷ್ಟೆ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.