ಬೆಂಗಳೂರು: ನಾಯಕ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿರುವ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗದ ವರದಿಯನ್ನು ಎರಡು ತಿಂಗಳೊಳಗೆ ತರಿಸಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿ ಭಾನುವಾರ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಫೆಬ್ರುವರಿಯಲ್ಲಿ ಮುಂಡಿಸಲಿರುವ ಮುಂದಿನ ಬಜೆಟ್ನಲ್ಲಿ ವಾಲ್ಮೀಕಿ ಸಮುದಾಯದ ಪ್ರಗತಿಗಾಗಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು.
ಇದಕ್ಕೆ ಮೊದಲು ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ಈ ಹಿಂದಿನ ಸಮ್ಮಿಶ್ರ ಸರ್ಕಾರ ರಚಿಸಿದ ಆಯೋಗವನ್ನೇ ಈ ಸರ್ಕಾರವೂ ಮುಂದುವರಿಸುವ ಮೂಲಕ ನಾಯಕ ಜನಾಂಗಕ್ಕೆ ಶೀಘ್ರ ಮೀಸಲಾತಿಯ ಸೌಲಭ್ಯ ದೊರಕಿಸುವಂತೆ ಮಾಡಲು ಸರ್ಕಾರ ಬಯಸಿದೆ ಎಂದರು.
ವಾಲ್ಮೀಕಿ ಗುರುಪೀಠದ ಜಗದ್ಗುರು ಪ್ರಸನ್ನಾನಂದಪುರಿ ಮಹಾಸ್ವಾಮೀಜಿ ಅವರು ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸಬೇಕು ಹಾಗೂ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು ಎಂದರು.
ಸುರಪುರದ ಶಾಸಕ ರಾಜು ಕಾಗೆ ಮಾತನಾಡಿ, ಶೇ 7.5ರಷ್ಟು ಮೀಸಲಾತಿ ನೀಡಿದರೆ ನಮಗೆ ಉಪಮುಖ್ಯಮಂತ್ರಿ ಸಹಿತ ಯಾವ ಕೊಡುಗೆಯೂ ಬೇಡ ಎಂದರು.