ಬೆಂಗಳೂರು: ಶೈಕ್ಷಣಿಕ ಸಾಲ ಬಡ್ಡಿ ಸಬ್ಸಿಡಿ ಯೋಜನೆಯ ಪ್ರಯೋಜನವನ್ನು ಯಾವುದೇ ತಾರತಮ್ಯ ಇಲ್ಲದೆ ಎಲ್ಲ ವಿದ್ಯಾರ್ಥಿಗಳಿಗೆ ವಿಸ್ತರಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್ ನೀಡಲುಹೈಕೋರ್ಟ್ ಆದೇಶಿಸಿದೆ.
ಡಾ. ರಾಮಮನೋಹರ್ ಲೋಹಿಯಾ ಚಿಂತಕರ ವೇದಿಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿತು.ಕೇಂದ್ರ ವಲಯದ ಬಡ್ಡಿ ಸಬ್ಸಿಡಿ ಯೋಜನೆ (ಸಿಎಸ್ಐಎಸ್) ಬಡ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತಿದೆ.
ಸಂಪೂರ್ಣ ಸಾಲ ಮತ್ತು ಬಡ್ಡಿ ಮನ್ನಾ ಎರಡೂ ಕೋರಿಕೆಯನ್ನು ಒಪ್ಪದ ಪೀಠ,ಸಿಎಸ್ಐಎಸ್ ಯೋಜನೆಯ ಲಾಭವನ್ನು ಎಲ್ಲರಿಗೆ ವಿಸ್ತರಿಸುವ ಮೂರನೇ ಕೋರಿಕೆ ಆಧರಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಸೇರಿ ಹಲವು ಪ್ರತಿವಾದಿಗಳಿಗೆ ನೋಟಿಸ್ ನೀಡಲು ಆದೇಶಿಸಿತು.
‘ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಸಿಎಸ್ಐಎಸ್ ಯೋಜನೆಯನ್ನು ಪರಿಚಯಿಸಿದೆ. ಪೋಷಕರ ಆದಾಯ ವಾರ್ಷಿಕ ₹4.50 ಲಕ್ಷದವರೆಗೆ ಇರುವ ವಿದ್ಯಾರ್ಥಿಗಳು ಈ ಯೋಜನೆ ಲಾಭ ಪಡೆಯಲು ಅರ್ಹರು. ಉಳಿದವರಿಗೆ ಅನ್ವಯವಾಗುತ್ತಿಲ್ಲ’ ಎಂದು ಅರ್ಜಿದಾರರು ಹೇಳಿದ್ದಾರೆ.