<p><strong>ಬೆಂಗಳೂರು</strong>: ಅತಿವಿರಳ ಸಂದರ್ಭದಲ್ಲಿ ರೂಪುಗೊಳ್ಳುವ ಗಂಧದ ಬಣ್ಣದ ಚರ್ಮ–ತುಪ್ಪಳ ಮತ್ತು ಮಂಕಾದ ಕಂದು ಬಣ್ಣದ ಚುಕ್ಕೆಗಳಿರುವ ಚಿರತೆಯು ರಾಜ್ಯದ ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಇದನ್ನು ಪತ್ತೆ ಮಾಡಿರುವ ವನ್ಯಜೀವಿ ತಜ್ಞರ ತಂಡವು, ಇದಕ್ಕೆ ‘ಚಂದನ ಚಿರತೆ’ ಎಂದು ಹೆಸರಿಟ್ಟಿದೆ.</p><p>ಕಲ್ಯಾಣ ಕರ್ನಾಟಕ ಭಾಗದಲ್ಲಿನ ವನ್ಯಜೀವಿಗಳ ಅಧ್ಯಯನ ನಡೆಸುತ್ತಿರುವ ಹೊಳೆಮತ್ತಿ ನೇಚರ್ ಫೌಂಡೇಶನ್ (ಎಚ್ಎನ್ಎಫ್) ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಸಾಧನಗಳನ್ನು ಅಳವಡಿಸಿತ್ತು. ಈ ಕ್ಯಾಮೆರಾಗಳಲ್ಲಿ ಅತ್ಯಪರೂಪದ ‘ಚಂದನ ಚಿರತೆ’ ಹಲವು ಬಾರಿ ಸೆರೆಯಾಗಿದೆ. </p>.<p>ಸಾಮಾನ್ಯ ಚಿರತೆಗಳು ಹಳದಿ–ಕಂದು ಮಿಶ್ರಿತ ಚರ್ಮ ಮತ್ತು ಕಪ್ಪು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಆದರೆ, ಈ ಚಿರತೆಯು ಗಂಧದ ಬಣ್ಣವನ್ನು ಹೋಲುವ ಕೆಂಪು–ಗುಲಾಬಿ ಮಿಶ್ರಿತ ಬಣ್ಣದ ತುಪ್ಪಳ ಮತ್ತು ಮಾಸಲು ಕಂದು ಬಣ್ಣದ ಚುಕ್ಕೆ ಹೊಂದಿದೆ. ಜಗತ್ತಿನಾದ್ಯಂತ ಈವರೆಗೆ ಕೆಲವು ಬಾರಿಯಷ್ಟೇ ಈ ಸ್ವರೂಪದ ಚಿರತೆಗಳು ಪತ್ತೆಯಾಗಿವೆ.</p>.<p>‘ಜಾಗತಿಕವಾಗಿ ಇಂತಹದ್ದನ್ನು ಸ್ಟ್ರಾಬೆರಿ ಚಿರತೆ (Strawberry Leopard) ಎಂದು ಕರೆಯುತ್ತಾರೆ. ಆದರೆ ಈ ರೂಪಾಂತರಕ್ಕೆ ಸ್ಥಳೀಯ ಗುರುತನ್ನು ನೀಡಲು ಮತ್ತು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಲು ‘ಚಂದನ ಚಿರತೆ’ ಎಂದು ನಾಮಕರಣ ಮಾಡಲಾಗಿದೆ’ ಎಂದು ಎಚ್ಎನ್ಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ದಕ್ಷಿಣ ಆಫ್ರಿಕಾದಲ್ಲಿ ಕೆಲವು ಬಾರಿ, ತಾಂಜೇನಿಯಾದಲ್ಲಿ ಒಂದು ಬಾರಿ, ರಾಜಸ್ಥಾನದ ರಣಕಪುರದಲ್ಲಿ 2021ರಲ್ಲಿ ಈ ಚಿರತೆ ಪತ್ತೆಯಾಗಿತ್ತು. ಭಾರತದಲ್ಲಿ ಇಂತಹ ಚಿರತೆ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ, ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಎಂದು ಎಚ್ಎನ್ಎಫ್ ಮಾಹಿತಿ ನೀಡಿದೆ. </p>.<p>ಸಂಜಯ್ ಗುಬ್ಬಿ, ಸಂದೇಶ್ ಅಪ್ಪು ನಾಯ್ಕ್, ಶ್ರವಣ್ ಸುತಾರ್, ಪೂರ್ಣೇಶ ಎಚ್.ಸಿ., ರೂಮಾ ಕಂದುರ್ಕರ್, ರವಿಚಂದ್ರ ವೆಲಿಪ್, ದಯಾನಂದ ಮಿರಾಶಿ, ಸುಮಿತ್ ವೆಲಿಪ್, ಐಶ್ವರ್ಯ ಕಾರಂತ್ ಮತ್ತು ಮಯೂರ ಮಿರಾಶಿ ಅವರಿರುವ ಎಚ್ಎನ್ಎಫ್ ತಂಡವು ಈ ಚಿರತೆ ಕುರಿತಾದ ಅಧ್ಯಯನ ನಡೆಸುತ್ತಿದೆ.</p>.<p><strong>‘ಮತ್ತಷ್ಟು ಅಧ್ಯಯನ ನಡೆಯಬೇಕಿದೆ’ </strong></p><p>ಚಿರತೆಯಲ್ಲಿನ ಆನುವಂಶಿಕ ಬದಲಾವಣೆಯಿಂದ ಅದರ ಚರ್ಮದಲ್ಲಿ ಅತಿಯಾದ ಕೆಂಪು ಬಣ್ಣ ಉತ್ಪಾದನೆಯಾಗಿ ಮತ್ತು ಗಾಢ ಬಣ್ಣದ ಕೊರತೆಯಿಂದ ಈ ವರ್ಣ ಸಂಯೋಜನೆ ರೂಪುಗೊಳ್ಳುತ್ತದೆ ಎಂದು ನಂಬಲಾಗಿದೆ. ಈ ಲಕ್ಷಣಗಳು ವಿಶಿಷ್ಟವಾಗಿದ್ದರೂ ನಿಖರವಾದ ಆನುವಂಶಿಕ ಬದಲಾವಣೆಯನ್ನು ದೃಢೀಕರಿಸಲು ಅವುಗಳ ಮಲ ಅಥವಾ ಕೂದಲುಗಳಿಂದ ಆನುವಂಶಿಕ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುವ ಅಗತ್ಯವಿದೆ. ಅಲ್ಲಿಯವರೆಗೆ ಈ ಪ್ರಾಣಿಯನ್ನು ನಿರ್ದಿಷ್ಟ ಆನುವಂಶಿಕ ವಿಧಕ್ಕೆ (‘ಹೈಪೊಮೆಲನಿಸಮ್’ ಅಥವಾ ‘ಎರಿತ್ರಿಸಮ್’) ಸೇರಿಸುವ ಬದಲು ವಿರಳವಾದ ಬಣ್ಣದ ರೂಪಾಂತರವೆಂದು ಪರಿಗಣಿಸುವುದು ಸೂಕ್ತ. ಸಂಜಯ್ ಗುಬ್ಬಿ ಹೊಳೆಮತ್ತಿ ನೇಚರ್ ಫೌಂಡೇಶನ್ನ ಸಂಸ್ಥಾಪಕ</p>.<ul><li><p>ವಿಜಯನಗರದ ಚಂದನ ಸುಂದರಿ 6–7 ವರ್ಷ ವಯಸ್ಸಿನ ಹೆಣ್ಣು ಚಿರತೆ </p></li><li><p>ಕೆಂಪು–ಗುಲಾಬಿ ಮಿಶ್ರಣದ ಗಂಧದ ಬಣ್ಣದ ಚರ್ಮ ಮತ್ತು ತುಪ್ಪಳ </p></li><li><p>ಮಾಸಲು ಅಥವಾ ಮಂಕಾದ ಕಂದು ಬಣ್ಣದ ಚುಕ್ಕೆಗಳು </p></li><li><p>ಸಾಮಾನ್ಯ ಬಣ್ಣದ ಮರಿಚಿರತೆಯೊಂದಿಗೂ ಈ ಚಂದನ ಚಿರತೆ ಕಾಣಿಸಿಕೊಂಡಿದೆ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಅತಿವಿರಳ ಸಂದರ್ಭದಲ್ಲಿ ರೂಪುಗೊಳ್ಳುವ ಗಂಧದ ಬಣ್ಣದ ಚರ್ಮ–ತುಪ್ಪಳ ಮತ್ತು ಮಂಕಾದ ಕಂದು ಬಣ್ಣದ ಚುಕ್ಕೆಗಳಿರುವ ಚಿರತೆಯು ರಾಜ್ಯದ ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಇದನ್ನು ಪತ್ತೆ ಮಾಡಿರುವ ವನ್ಯಜೀವಿ ತಜ್ಞರ ತಂಡವು, ಇದಕ್ಕೆ ‘ಚಂದನ ಚಿರತೆ’ ಎಂದು ಹೆಸರಿಟ್ಟಿದೆ.</p><p>ಕಲ್ಯಾಣ ಕರ್ನಾಟಕ ಭಾಗದಲ್ಲಿನ ವನ್ಯಜೀವಿಗಳ ಅಧ್ಯಯನ ನಡೆಸುತ್ತಿರುವ ಹೊಳೆಮತ್ತಿ ನೇಚರ್ ಫೌಂಡೇಶನ್ (ಎಚ್ಎನ್ಎಫ್) ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಸಾಧನಗಳನ್ನು ಅಳವಡಿಸಿತ್ತು. ಈ ಕ್ಯಾಮೆರಾಗಳಲ್ಲಿ ಅತ್ಯಪರೂಪದ ‘ಚಂದನ ಚಿರತೆ’ ಹಲವು ಬಾರಿ ಸೆರೆಯಾಗಿದೆ. </p>.<p>ಸಾಮಾನ್ಯ ಚಿರತೆಗಳು ಹಳದಿ–ಕಂದು ಮಿಶ್ರಿತ ಚರ್ಮ ಮತ್ತು ಕಪ್ಪು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತವೆ. ಆದರೆ, ಈ ಚಿರತೆಯು ಗಂಧದ ಬಣ್ಣವನ್ನು ಹೋಲುವ ಕೆಂಪು–ಗುಲಾಬಿ ಮಿಶ್ರಿತ ಬಣ್ಣದ ತುಪ್ಪಳ ಮತ್ತು ಮಾಸಲು ಕಂದು ಬಣ್ಣದ ಚುಕ್ಕೆ ಹೊಂದಿದೆ. ಜಗತ್ತಿನಾದ್ಯಂತ ಈವರೆಗೆ ಕೆಲವು ಬಾರಿಯಷ್ಟೇ ಈ ಸ್ವರೂಪದ ಚಿರತೆಗಳು ಪತ್ತೆಯಾಗಿವೆ.</p>.<p>‘ಜಾಗತಿಕವಾಗಿ ಇಂತಹದ್ದನ್ನು ಸ್ಟ್ರಾಬೆರಿ ಚಿರತೆ (Strawberry Leopard) ಎಂದು ಕರೆಯುತ್ತಾರೆ. ಆದರೆ ಈ ರೂಪಾಂತರಕ್ಕೆ ಸ್ಥಳೀಯ ಗುರುತನ್ನು ನೀಡಲು ಮತ್ತು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಲು ‘ಚಂದನ ಚಿರತೆ’ ಎಂದು ನಾಮಕರಣ ಮಾಡಲಾಗಿದೆ’ ಎಂದು ಎಚ್ಎನ್ಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ದಕ್ಷಿಣ ಆಫ್ರಿಕಾದಲ್ಲಿ ಕೆಲವು ಬಾರಿ, ತಾಂಜೇನಿಯಾದಲ್ಲಿ ಒಂದು ಬಾರಿ, ರಾಜಸ್ಥಾನದ ರಣಕಪುರದಲ್ಲಿ 2021ರಲ್ಲಿ ಈ ಚಿರತೆ ಪತ್ತೆಯಾಗಿತ್ತು. ಭಾರತದಲ್ಲಿ ಇಂತಹ ಚಿರತೆ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ, ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಎಂದು ಎಚ್ಎನ್ಎಫ್ ಮಾಹಿತಿ ನೀಡಿದೆ. </p>.<p>ಸಂಜಯ್ ಗುಬ್ಬಿ, ಸಂದೇಶ್ ಅಪ್ಪು ನಾಯ್ಕ್, ಶ್ರವಣ್ ಸುತಾರ್, ಪೂರ್ಣೇಶ ಎಚ್.ಸಿ., ರೂಮಾ ಕಂದುರ್ಕರ್, ರವಿಚಂದ್ರ ವೆಲಿಪ್, ದಯಾನಂದ ಮಿರಾಶಿ, ಸುಮಿತ್ ವೆಲಿಪ್, ಐಶ್ವರ್ಯ ಕಾರಂತ್ ಮತ್ತು ಮಯೂರ ಮಿರಾಶಿ ಅವರಿರುವ ಎಚ್ಎನ್ಎಫ್ ತಂಡವು ಈ ಚಿರತೆ ಕುರಿತಾದ ಅಧ್ಯಯನ ನಡೆಸುತ್ತಿದೆ.</p>.<p><strong>‘ಮತ್ತಷ್ಟು ಅಧ್ಯಯನ ನಡೆಯಬೇಕಿದೆ’ </strong></p><p>ಚಿರತೆಯಲ್ಲಿನ ಆನುವಂಶಿಕ ಬದಲಾವಣೆಯಿಂದ ಅದರ ಚರ್ಮದಲ್ಲಿ ಅತಿಯಾದ ಕೆಂಪು ಬಣ್ಣ ಉತ್ಪಾದನೆಯಾಗಿ ಮತ್ತು ಗಾಢ ಬಣ್ಣದ ಕೊರತೆಯಿಂದ ಈ ವರ್ಣ ಸಂಯೋಜನೆ ರೂಪುಗೊಳ್ಳುತ್ತದೆ ಎಂದು ನಂಬಲಾಗಿದೆ. ಈ ಲಕ್ಷಣಗಳು ವಿಶಿಷ್ಟವಾಗಿದ್ದರೂ ನಿಖರವಾದ ಆನುವಂಶಿಕ ಬದಲಾವಣೆಯನ್ನು ದೃಢೀಕರಿಸಲು ಅವುಗಳ ಮಲ ಅಥವಾ ಕೂದಲುಗಳಿಂದ ಆನುವಂಶಿಕ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸುವ ಅಗತ್ಯವಿದೆ. ಅಲ್ಲಿಯವರೆಗೆ ಈ ಪ್ರಾಣಿಯನ್ನು ನಿರ್ದಿಷ್ಟ ಆನುವಂಶಿಕ ವಿಧಕ್ಕೆ (‘ಹೈಪೊಮೆಲನಿಸಮ್’ ಅಥವಾ ‘ಎರಿತ್ರಿಸಮ್’) ಸೇರಿಸುವ ಬದಲು ವಿರಳವಾದ ಬಣ್ಣದ ರೂಪಾಂತರವೆಂದು ಪರಿಗಣಿಸುವುದು ಸೂಕ್ತ. ಸಂಜಯ್ ಗುಬ್ಬಿ ಹೊಳೆಮತ್ತಿ ನೇಚರ್ ಫೌಂಡೇಶನ್ನ ಸಂಸ್ಥಾಪಕ</p>.<ul><li><p>ವಿಜಯನಗರದ ಚಂದನ ಸುಂದರಿ 6–7 ವರ್ಷ ವಯಸ್ಸಿನ ಹೆಣ್ಣು ಚಿರತೆ </p></li><li><p>ಕೆಂಪು–ಗುಲಾಬಿ ಮಿಶ್ರಣದ ಗಂಧದ ಬಣ್ಣದ ಚರ್ಮ ಮತ್ತು ತುಪ್ಪಳ </p></li><li><p>ಮಾಸಲು ಅಥವಾ ಮಂಕಾದ ಕಂದು ಬಣ್ಣದ ಚುಕ್ಕೆಗಳು </p></li><li><p>ಸಾಮಾನ್ಯ ಬಣ್ಣದ ಮರಿಚಿರತೆಯೊಂದಿಗೂ ಈ ಚಂದನ ಚಿರತೆ ಕಾಣಿಸಿಕೊಂಡಿದೆ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>