ಬೆಳಗಾವಿ: 'ನನ್ನ ಮಗನ ಆತ್ಮಹತ್ಯೆ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ. ಹಾಗಾಗಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿದ್ದಾರೆ' ಎಂದು ಗುತ್ತಿಗೆದಾರ ಸಂತೋಷ ಪಾಟೀಲ ಅವರ ತಾಯಿ ಪಾರ್ವತಿ ಹೇಳಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನನ್ನ ಮಗ ಸಂತೋಷನು ಈಶ್ವರಪ್ಪ ಅವರಿಗೆ ಕಮಿಷನ್ ಕೊಟ್ಟಿದ್ದೇವೆ ಎಂದಿದ್ದ. ಆದರೆ, ಈ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಕೊಡಲಾಗಿದೆ. ನನ್ನ ಮಗನಿಗೆ ನ್ಯಾಯ ಸಿಕ್ಕಿಲ್ಲ' ಎಂದು ಕಣ್ಣೀರು ಹಾಕಿದರು.
'ಬಿ.ಎಸ್.ಯಡಿಯೂರಪ್ಪ ಅವರಿಗೆ ನನ್ನ ಮಗ ಅಪ್ಪಾಜಿ ಎಂದು ಕರೆಯುತ್ತಿದ್ದ. ಸೊಸೆಗೆ ನೌಕರಿ ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದೂ ಈಡೇರಿಲ್ಲ. ಕಾಮಗಾರಿ ಕೈಗೊಂಡ ಹಣವನ್ನೂ ಕೊಡಲಿಲ್ಲ' ಎಂದರು.
'ಈ ಪ್ರಕರಣದಲ್ಲಿ 'ಬಿ' ರಿಪೋರ್ಟ್ ಬಂದ ನಂತರ, ಈಶ್ವರಪ್ಪ ಅವರ ಮನೆಯಲ್ಲಿ ಕುಟುಂಬಸ್ಥರು ಸಿಹಿ ತಿಂದರು. ಅವರಿಗೇ ನಮ್ಮಂತಹ ಪರಿಸ್ಥಿತಿ ಬಂದಿದ್ದರೆ, ಸಿಹಿ ತಿನ್ನುತ್ತಿದ್ದರಾ?' ಎಂದು ಪ್ರಶ್ನಿಸಿದರು.
'ಮಗ ಆತ್ಮಹತ್ಯೆ ಮಾಡಿಕೊಂಡ ನಂತರ, ಬಿಜೆಪಿ ಸರ್ಕಾರದ ಒಬ್ಬ ಪ್ರತಿನಿಧಿಯೂ ನಮ್ಮ ಮನೆಗೆ ಬಂದು ಭೇಟಿಯಾಗಿಲ್ಲ. ಈಗ ಸಿ.ಎಂ ಮರುತನಿಖೆ ನಡೆಸುತ್ತೇವೆ ಎಂದಿದ್ದಾರೆ. ಅವರು ಏನು ಮಾಡುತ್ತಾರೆಯೇ ನೋಡೋಣ' ಎಂದರು.