ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೈರಪ್ಪ, ಕಣವಿ, ತಿಮ್ಮಕ್ಕ ಸೇರಿ ಐವರಿಗೆ ಸಿಯುಕೆ ಗೌರವ ಡಾಕ್ಟರೇಟ್‌

Last Updated 19 ಮಾರ್ಚ್ 2020, 12:09 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಕಾದಂಬರಿಕಾರ ಡಾ.ಎಸ್‌.ಎಲ್‌.ಭೈರಪ್ಪ, ಕವಿ ಡಾ.ಚನ್ನವೀರ ಕಣವಿ, ಪರಿಸರವಾದಿ ಸಾಲುಮರದ ತಿಮ್ಮಪ್ಪ, ಇಸ್ರೊ ಅಧ್ಯಕ್ಷ ಕೆ.ಶಿವನ್ ಹಾಗೂ ಸಾಹಿತಿ ಡಾ.ಮ.ಗು.ಬಿರಾದಾರ ಅವರಿಗೆ ಗೌರವ ಡಾಕ್ಟರ್‌ ನೀಡಲಿದೆ.

ಈ ಐವರ ಹೆಸರುಗಳನ್ನೂ ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಮಂಡಳಿಯಲ್ಲಿ ಒಪ್ಪಿಗೆ ಪಡೆದು ರಾಷ್ಟ್ರಪತಿಗಳ ಅನುಮೋದನೆಗೆ ಕಳಿಸಲಾಗಿತ್ತು. ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅನುಮೋದನೆ ನೀಡಿದ್ದಾರೆ. ಬುಧವಾರ ಪತ್ರವು ವಿಶ್ವವಿದ್ಯಾಲಯ ತಲುಪಿದ್ದು, ಮುಂಬರುವ ಘಟಿಕೋತ್ಸವದಲ್ಲಿ ಐವರಿಗೂ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಎಚ್‌.ಎಂ.ಮಹೇಶ್ವರಯ್ಯ ತಿಳಿಸಿದ್ದಾರೆ.

ಡಾ.ಎಸ್.ಎಲ್.ಭೈರಪ್ಪ: ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರು 1934ರಲ್ಲಿ ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದರು. ಕನ್ನಡದ ಸಣ್ಣಕಥೆ, ಸಂಶೋಧನೆ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಇವರು 25ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿ ದೇಶ ವಿದೇಶಗಳಲ್ಲಿ ಕೀರ್ತಿ ಪಡೆದಿದ್ದಾರೆ. ಇವರ ಕಾದಂಬರಿಗಳು ಇಂಗ್ಲಿಷ್ ಸೇರಿದಂತೆ ಭಾರತದ ಅನೇಕ ಭಾಷೆಗಳಲ್ಲಿ ಅನುವಾದ ಕಂಡಿದೆ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಇವರ ಕಾದಂಬರಿಗಳು ಚಲನಚಿತ್ರವಾಗಿ ಕನ್ನಡಿಗರ ಮನಸ್ಸನ್ನು ಗೆದ್ದಿದೆ. ಶ್ರೇಷ್ಠ ಕಾದಂಬರಿಕಾರರಾದ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಮುಂತಾದ ಸಂಸ್ಥೆಗಳ ಗೌರವ ದೊರಕಿದೆ.

ಡಾ.ಎಂ.ಜಿ.ಬಿರಾದಾರ: 1933ರಲ್ಲಿ ವಿಜಯಪುರ ಜಿಲ್ಲೆಯ ಬಬಲೇಶ್ವರದ ಕೃಷಿ ಕುಟುಂಬದಲ್ಲಿ ಜನಿಸಿದ ಮಲ್ಲನಗೌಡ ಗುರುಗೌಡ ಬಿರಾದಾರರು, 1970ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ವೃತ್ತಿ ಜೀವನ ಆರಂಭಿಸಿ ಜಾನಪದ ಸಂಗ್ರಹ, ಹಸ್ತಪ್ರತಿ ಸಂಗ್ರಹ, ದಾಖಲಾತಿ ಮಾಡುತ್ತಾ 70ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಕಲಬುರ್ಗಿಯಲ್ಲಿ ಕನ್ನಡವನ್ನು ಕಟ್ಟುವ, ಬೆಳಸುವ ಅನನ್ಯ ಸೇವೆಯನ್ನು ಮಾಡಿದ್ದಾರೆ.

ಡಾ.ಚೆನ್ನವೀರ ಕಣವಿ: ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928ರಲ್ಲಿ ಜನಿಸಿದ ಡಾ.ಚನ್ನವೀರ ಕಣವಿಯವರು ಸೌಜನ್ಯದ, ಮೃದುಮಾತಿನ ಅನನ್ಯ ಕವಿ. ಅವರ ಕಾವ್ಯಗಳು ಕನ್ನಡಿಗರಿಗೆ ಅಚ್ಚುಮೆಚ್ಚು. ಕನ್ನಡದ ಮಹತ್ವದ ಕವಿಯೆಂದು ಖ್ಯಾತರಾಗಿರುವ ಕಣವಿಯವರ ಸಂವೇದನಾಶೀಲತೆ, ಭಾವಸ್ಪಂದನೆ, ಪ್ರಕೃತಿಪ್ರೇಮ ಅವರ ಕಾವ್ಯಗಳ ಜೀವಧ್ವನಿಯಾಗಿದೆ. ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನಾಡೋಜ ಪ್ರಶಸ್ತಿಗೆ ಗೌರವತಂದಿರುವ ಇವರು ಕನ್ನಡದ ಜನಪ್ರಿಯ ಕವಿಗಳಾಗಿದ್ದಾರೆ.

ಸಾಲುಮರದ ತಿಮ್ಮಕ್ಕ: ಸಾಲುಮರ ತಿಮ್ಮಕ್ಕ ಎಂದು ಪ್ರಸಿದ್ಧರಾಗಿರುವ ಇವರು 1910ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ್ದಾರೆ. 385 ಆಲದ ಮರಗಳನ್ನು 4 ಕಿಲೋಮೀಟರ್ ರಹದಾರಿಯ ಅಕ್ಕಪಕ್ಕದಲ್ಲಿ ನೆಟ್ಟು ಅವುಗಳಿಗೆ ನೀರೆರೆದು ಬೆಳೆಸಿದ ಮಹಾತಾಯಿ. ಅಲ್ಲದೆ 8000 ಇತರ ಗಿಡಗಳನ್ನು ನೆಟ್ಟು ಪ್ರಕೃತಿಯ ಸಮತೋಲನವನ್ನು ಕಾಪಾಡಿ ಜನಪರ ಜೀವಪರ ಕಾಳಜಿಯನ್ನು ತೋರಿದ್ದಾರೆ. 2019ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾದ ಇವರು ಶತಾಯುಷಿಗಳಾಗಿದ್ದಾರೆ.

ಕೆ.ಶಿವನ್: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಚೇರಮನ್‌ರಾದ ಕೈಲಾಸವಡಿವೂ ಶಿವನ್ ಅವರು 1957ರಲ್ಲಿ ಕನ್ಯಾಕುಮಾರಿ ಜಿಲ್ಲೆಯ ಸರಕ್ಕವಿಲೈನಲ್ಲಿ ಜನಿಸಿದ್ದಾರೆ. ಬಡಕುಟುಂಬದಿಂದ ಬಂದ ಇವರು ನಂತರ ವಿಕ್ರಮ ಸಾರಾಭಾಯ್ ಬಾಹ್ಯಾಕಾಶ ಸಂಸ್ಥೆ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿ ಅಧ್ಯಯನ ಮಾಡಿದ್ದಾರೆ. ಬಾಹ್ಯಕಾಶದ 'ಚಂದ್ರಯಾನ-2'ರ ರೂವಾರಿಯಾದ ಇವರು ಭಾರತ ಹೆಮ್ಮೆಯಪಡುವ ಬಾಹ್ಯಾಕಾಶ ವಿಜ್ಞಾನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT