ಹುಣಸೂರು (ಮೈಸೂರು ಜಿಲ್ಲೆ): ದಸರಾ ಜಂಬೂಸವಾರಿಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಹೆಗ್ಗಳಿಕೆಯ ‘ಬಲರಾಮ’ ಆನೆ (67) ಅಸ್ವಸ್ಥಗೊಂಡಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಭೀಮನಕಟ್ಟೆ ಆನೆ ಶಿಬಿರದಲ್ಲಿರುವ ಆನೆ ಕೆಲವು ದಿನಗಳಿಂದ ಆಹಾರ ತ್ಯಜಿಸಿದೆ. ಅರಣ್ಯ ಇಲಾಖೆಯ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದಾರೆ.
‘ಆನೆಗೆ ಗಂಟಲಿನಲ್ಲಿ ಹುಣ್ಣಾಗಿದೆ. ಮೇವು ನಿರಾಕರಿಸುತ್ತಿರುವುದರಿಂದ ನಿತ್ರಾಣಗೊಂಡಿದೆ. ಎಂಡೋಸ್ಕೋಪಿ ಮಾಡಿ ರಕ್ತ, ಅಂಗಾಂಗದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿ ಆಧರಿಸಿ ಚಿಕಿತ್ಸೆ ನಡೆಸಲು ಸಿದ್ದತೆ ನಡೆದಿದೆ’ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಲರಾಮನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃದು ಆಹಾರವಾದ ರಾಗಿ ಗಂಜಿ, ರಾಗಿ ಮುದ್ದೆ, ಕಲ್ಲಂಗಡಿ, ಬಾಳೆ ಹಣ್ಣು ಮತ್ತು ಗ್ಲೂಕೋಸ್ ನೀಡಲಾಗುತ್ತಿದೆ. ಪಶುವೈದ್ಯಾಧಿಕಾರಿಗಳಾದ ಡಾ.ಚಟ್ಟಿಯಪ್ಪ ಹಾಗೂ ಡಾ.ರಮೇಶ್ ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.